ಬೆಂಗಳೂರು: ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವಾಗ್ವಾದ ಎರಡನೇ ದಿನವಾದ ಸೋಮವಾರವೂ ಮುಂದುವರಿಯಿತು.
‘ರಾಜ್ಯ ಸರ್ಕಾರದ ವಿರುದ್ಧ ಆಧಾರರಹಿತ, ಬೇಜವಾಬ್ದಾರಿ ಆರೋಪಗಳನ್ನು ಮಾಡಿರುವ ನರೇಂದ್ರ ಮೋದಿ ಅವರಿಗೆ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನ ಮಾಧ್ಯಮ ಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ ಬೆಳಿಗ್ಗೆ ಮಾಧ್ಯಮಗೋಷ್ಠಿಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಿದ್ದರಾಮಯ್ಯನವರದು 10 ಪರ್ಸೆಂಟ್ ಕಮಿಷನ್ ಸರ್ಕಾರವಲ್ಲ. 30 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಆರೋಪಿಸಿದರು.
ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪದಲ್ಲಿ ಭಾನುವಾರ ಮಾತನಾಡಿದ್ದ ಮೋದಿ, ‘ರಾಜ್ಯ ಸರ್ಕಾರ ಎಲ್ಲ ಯೋಜನೆಗಳಲ್ಲೂ ಶೇ 10ರಷ್ಟು ಕಮಿಷನ್ ಪಡೆಯುತ್ತಿದೆ’ ಎಂದು ಗಂಭೀರ ಆರೋಪ ಮಾಡಿದ್ದರು. ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಭಾನುವಾರವೇ ಪ್ರಧಾನಿಗೆ ತಿರುಗೇಟು ನೀಡಿದ್ದರು.
ಪ್ರಧಾನಿ ವಿರುದ್ಧ ಸಿಎಂ ದ್ವೇಷ:
ರಾಜ್ಯಕ್ಕೆ ಪ್ರಧಾನಮಂತ್ರಿ ಬಂದಾಗ ಮುಖ್ಯಮಂತ್ರಿ ಅವರನ್ನು ಬರ ಮಾಡಿಕೊಳ್ಳುವುದು ಶಿಷ್ಟಾಚಾರ. ಆದರೆ, ಸಿದ್ದರಾಮಯ್ಯ ಬರಮಾಡಿಕೊಳ್ಳದೇ ಅಗೌರವ ತೋರಿದ್ದಾರೆ. ಇದು ರಾಜ್ಯದ ಜನತೆ ಮಾಡಿದ ಅಪಮಾನ. ಈ ಮೂಲಕ ದ್ವೇಷದ ರಾಜಕಾರಣ ಆರಂಭಿಸಿದ್ದಾರೆ ಎಂದು ಸದಾನಂದಗೌಡ ತಿಳಿಸಿದರು.