ನಾಗ್ಪುರ: ಇಲ್ಲಿನ ಸ್ಥಳೀಯ ಪತ್ರಕರ್ತನ ತಾಯಿ ಹಾಗೂ ಒಂದು ವರ್ಷದ ಮಗಳನ್ನು ಹತ್ಯೆ ಮಾಡಲಾಗಿದೆ. ಪ್ರಕರಣ ಸಂಬಂಧ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
‘ಪತ್ರಕರ್ತ ರವಿಕಾಂತ್ ಕಾಂಬ್ಳೆ ಅವರು ತಾಯಿ ಉಷಾ ಕಾಂಬ್ಳೆ(52), ಮಗಳು ರಿಷಿ (1) ಇಬ್ಬರು ಭಾನುವಾರ ಸಂಜೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಆದರೆ, ಸೋಮವಾರ ಬೆಳಗ್ಗೆ 10.30ಕ್ಕೆ ಬಹದುರಾದ ನುಲ್ಲಾಹ ಪ್ರದೇಶದಲ್ಲಿ ಇವರ ಮೃತದೇಹಗಳು ಪತ್ತೆಯಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಉಷಾ ಕಾಂಬ್ಳೆ ಅವರು ಹಣಕಾಸು ವ್ಯವಹಾರ ನಡೆಸುತ್ತಿದರು ಎಂದು ಪೊಲೀಸ್ ಆಯುಕ್ತ ನಿಲೇಶ್ ಭರ್ನೆ ತಿಳಿಸಿದ್ದಾರೆ.
‘ಉಷಾ ಅವರು ಮೊಮ್ಮಗಳು ರಿಷಿಯೊಂದಿಗೆ ಭಾನುವಾರ ಸಂಜೆ 5.30ಕ್ಕೆ ಮನೆ ಸಮೀಪದ ಆಭರಣ ಅಂಗಡಿಗೆ ಹೋಗಿದ್ದರು. ಬಳಿಕ ಅವರು ಮನೆಗೆ ಹಿಂತಿರುಗಲಿಲ್ಲ. ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ರಾತ್ರಿ 10ಕ್ಕೆ ರವಿಕಾಂತ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ’ ಎಂದು ಭರ್ನೆ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ರಾಮಬರನ್ ಶಾಹು(26) ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.