ಬೆಂಗಳೂರು: ವಿಧಾನಸಭೆಯ 224 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಬಯಸುವ ಹಾಲಿ ಸಚಿವರು ಅರ್ಜಿಯೊಂದಿಗೆ ₹ 1 ಲಕ್ಷ ಶುಲ್ಕ ಪಾವತಿಸಬೇಕು.
ಸಂಸದರು, ಶಾಸಕರು, ಮಾಜಿ ಸಚಿವರು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು, ಹಾಲಿ ಮತ್ತು ಮಾಜಿ ಮೇಯರ್ಗಳಿಗೆ ₹ 50,000 ಅರ್ಜಿ ಶುಲ್ಕವನ್ನು ಪಕ್ಷ ನಿಗದಿಪಡಿಸಿದೆ.
ಸಾಮಾನ್ಯ ಕಾರ್ಯಕರ್ತರು ₹ 20,000, ಈ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರಿಗೆ ₹ 15,000 ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.
ಇದೇ 26 ರಿಂದ ಅರ್ಜಿ ವಿತರಣೆ ಆರಂಭವಾಗಲಿದ್ದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಶುಲ್ಕವನ್ನು ಮಾ.10ರೊಳಗೆ ಕೆಪಿಸಿಸಿ ಕಚೇರಿಯಲ್ಲಿ ಸಲ್ಲಿಸಬೇಕು. ಟಿಕೆಟ್ ಸಿಗದಿದ್ದರೆ ಶುಲ್ಕ ಮರುಪಾವತಿ ಇಲ್ಲ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.
ಪಕ್ಷಕ್ಕೆ ಚುನಾವಣಾ ನಿಧಿ ಸಂಗ್ರಹಿಸುವ ಉದ್ದೇಶದಿಂದ ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಎಲ್ಲ ವಿಭಾಗಗಳು ಸೇರಿ ಸುಮಾರು ಹತ್ತು ಸಾವಿರ ಅರ್ಜಿಗಳು ಸಲ್ಲಿಕೆಯಾಗಬಹುದೆಂದು ಪಕ್ಷದ ಮುಖಂಡರು ನಿರೀಕ್ಷಿಸಿದ್ದಾರೆ.