ಬೆಂಗಳೂರು: ಟೆಂಡರ್ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿರುವ ಚರ್ಚ್ ಸ್ಟ್ರೀಟ್ ಸೇರಿದಂತೆ ನಾಲ್ಕು ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 1ರಂದು ಉದ್ಘಾಟಿಸಲಿದ್ದಾರೆ.
‘ಚರ್ಚ್ಸ್ಟ್ರೀಟ್ ಅನ್ನು ಮಾರ್ಚ್ 4ರಂದು ಉದ್ಘಾಟಿಸಲು ಉದ್ದೇಶಿಸಲಾಗಿತ್ತು. ಮೂರು ದಿನ ಮುನ್ನವೇ ಇದರ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗಿದೆ. ಹಾಗಾಗಿ, ಕಾಮಗಾರಿ ಪೂರ್ಣಗೊಳಿಸಲು ರಾತ್ರಿ–ಹಗಲು ಕೆಲಸ ಮಾಡುತ್ತಿದ್ದೇವೆ’ ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
‘ಈ ರಸ್ತೆಯಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ವಾಹನ ಸಂಚಾರ ನಿಷೇಧಿಸಲು ನಿರ್ಧರಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಂಚಾರ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಆಯುಕ್ತರು ತಿಳಿಸಿದರು.
2017ರ ಫೆಬ್ರುವರಿ 22ರಂದು ಈ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಓಕಳಿಪುರ ಜಂಕ್ಷನ್ನ 8 ಪಥಗಳ ಮೇಲ್ಸೇತುವೆ ಹಾಗೂ ಕೆಳಸೇತುವೆ, ಸ್ವಾತಂತ್ರ್ಯ ಉದ್ಯಾನದಲ್ಲಿ ನಿರ್ಮಿಸಿರುವ ಬಹುಹಂತದ ವಾಹನ ನಿಲುಗಡೆ ಸಂಕೀರ್ಣ, ಎಂ.ಜಿ.ರಸ್ತೆಯ ಪಾದಚಾರಿ ಮಾರ್ಗಗಳನ್ನೂ ಮುಖ್ಯಮಂತ್ರಿ ಗುರುವಾರ ಉದ್ಘಾಟಿಸುವರು.