ಬೆಂಗಳೂರು: ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಪೀಠಾಧಿಪತಿ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಬಗ್ಗೆ ಮಾಧ್ವ ಬ್ರಾಹ್ಮಣ ಸಮುದಾಯದಿಂದ ಆಕ್ಷೇಪ ವ್ಯಕ್ತವಾಗಿದೆ.
‘ಮಾಧ್ಯಮಗಳಿಗೆ ಮಾಧ್ವ ಬ್ರಾಹ್ಮಣನ ಪ್ರಶ್ನೆಗಳು, ಉತ್ತರಿಸಿ...’ ಎಂಬ ಶೀರ್ಷಿಕೆಯಡಿ ವ್ಯಕ್ತಿಯೊಬ್ಬರು ಫೇಸ್ಬುಕ್ನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಸಂದೇಶವನ್ನು ಹಲವರು ಶೇರ್ ಮಾಡಿಕೊಂಡಿದ್ದಾರೆ. ಸಂದೇಶವೀಗ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ, ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ.
ಫೇಸ್ಬುಕ್ನಲ್ಲಿ ಪ್ರಕಟವಾಗಿರುವ ಸಂದೇಶ ಹೀಗಿದೆ:
‘ಮಾಧ್ಯಮಗಳಿಗೆ ಮಾಧ್ವ ಬ್ರಾಹ್ಮಣನ ಪ್ರಶ್ನೆಗಳು, ಉತ್ತರಿಸಿ...’
1) ಮಾರ್ಫ್ ಮಾಡಲಾಗಿದೆಯಾ?
ಮಾಧ್ಯಮದವರೇ ನೀವು ವಿಡಿಯೋದ ಸಾಚಾತನ ಪರಿಶೀಲಿಸಿದ್ದೀರಾ? ಧ್ವನಿ ಹಾಗೂ ಶಿರೂರು ಶ್ರೀಗಳು ಎನ್ನಲಾದ ವ್ಯಕ್ತಿಯ ಚಿತ್ರ ಮಾರ್ಫ್ ಮಾಡಲಾಗಿದೆಯಾ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸಿದ ನಂತರವೇ ಪ್ರಸಾರ ಮಾಡಲಾಗುತ್ತಿದೆಯಾ?
2) ಅವರು ಶಿರೂರು ಮಠಕ್ಕೆ ಮಾತ್ರ ಯತಿಗಳು ಎಂಬುದು ನಿಮಗೆ ಗೊತ್ತಿಲ್ಲವೇ?
ಅಷ್ಟ ಮಠಗಳು ಅಂದರೆ ಎಂಟು ಸುದ್ದಿವಾಹಿನಿಗಳು ಇದ್ದ ಹಾಗೆ. ಎಲ್ಲದಕ್ಕೂ ಪ್ರತ್ಯೇಕ ಅಸ್ತಿತ್ವ ಇವೆ. ಅಂಥದ್ದರಲ್ಲಿ ಶಿರೂರು ಮಠದ ಸ್ವಾಮಿಗಳು ಎಂಬುದನ್ನು ಅಷ್ಟ ಮಠದ ಯತಿ ಅಂತ ಏಕೆ ಪ್ರಸಾರ ಮಾಡುತ್ತಿದ್ದೀರಿ?
3) ವಿಡಿಯೋದಲ್ಲಿನ ‘ಮಾಧ್ವ ಯತಿಗಳು ಹೀಗೆಯೇ ಇರ್ತಾರೆ’ ಎಂಬ ಮಾತನ್ನು ಅನ್ವಯಿಸಿ ಕನ್ನಡ ಪತ್ರಿಕೋದ್ಯಮವೇ ಬ್ರಹ್ಮಾಂಡ ಭ್ರಷ್ಟಾಚಾರದ ಕೂಪ ಅನ್ನಬಹುದಾ?
ಇನ್ನು ವಿಡಿಯೋದಲ್ಲಿ ಸ್ವಾಮಿಗಳು ಹೇಳಿದರು ಎನ್ನಲಾದ, ‘ಅಷ್ಟ ಮಠದ ಎಲ್ಲ ಯತಿಗಳು ಹೀಗೆ’ ಎಂಬ ಮಾತನ್ನು ಪತ್ರಿಕೋದ್ಯಮಕ್ಕೂ ಅನ್ವಯಿಸಿ, ಯಾವುದೋ ಒಂದು ಚಾನೆಲ್ ಅಥವಾ ಪತ್ರಿಕೆಯ ಸಂಪಾದಕ, ‘ಎಲ್ಲ ಚಾನೆಲ್- ಪತ್ರಿಕೆ ಹೀಗೆ ಭ್ರಷ್ಟಾಚಾರಿಗಳು’ ಅಂದರು ಅಂತ ಇಟ್ಟುಕೊಳ್ಳಿ, ಆಗ ಕನ್ನಡ ಪತ್ರಿಕೋದ್ಯಮವೇ ಬ್ರಹ್ಮಾಂಡ ಭ್ರಷ್ಟಾಚಾರದ ಕೂಪ ಎಂದು ಆಗ ಕರೆಯಬಹುದೇ, ಪ್ರಚಾರ ಮಾಡಬಹುದೇ?
4) ಪೇಜಾವರರ ಅಭಿಪ್ರಾಯ ಏಕೆ ಬೇಕು?
ಶಿರೂರು ಮಠದ ಸ್ವಾಮಿಗಳ ಹೇಳಿಕೆಗೆ ಅಥವಾ ವಿಡಿಯೊಗೆ ಪೇಜಾವರ ಸ್ವಾಮೀಜಿ ಅಭಿಪ್ರಾಯ ಏಕೆ ಬೇಕು? ಅವರು ಅಷ್ಟಮಠಗಳ ಯತಿಗಳಲ್ಲಿ ಹಿರಿಯರು ಎಂಬುದು ನಿಮ್ಮ ವಾದ. ಹಾಗಾದರೆ ಒಂದು ಚಾನೆಲ್ನಲ್ಲಿ ಏನೋ ದೊಡ್ಡ ತಪ್ಪಾದರೆ, ಚಾನೆಲ್ಗಳ ಪೈಕಿಯೇ ಹಳೆಯದಾದ ಚಾನೆಲ್ನ ಮುಖ್ಯಸ್ಥರನ್ನು ಕರೆಸಿ, ಅವರ ಅಭಿಪ್ರಾಯ, ಅಪ್ಪಣೆ, ತೀರ್ಮಾನ ಕೇಳಿ ಮುಂದಿನ ಕ್ರಮ ಕೈಗೊಳ್ಳುತ್ತೀರಾ?
5) ಚುನಾವಣೆಗೆ ನಿಲ್ತೀನಿ ಅಂದಾಗಲೇ ಆ ವಿಡಿಯೋ ಏಕೆ ಬಂತು?
ವಿಡಿಯೊದಲ್ಲಿ ಇರುವಂತೆಯೇ ತಪ್ಪು ಮಾಡಿದ್ದರೆ ಆ ಮಠದ (ಶಿರೂರು ಮಠ) ಪರಂಪರಾಗತ ಶಿಷ್ಟಾಚಾರಗಳು, ನಮ್ಮ ದೇಶದ ಕಾನೂನುಬದ್ಧ ಸಂಸ್ಥೆಗಳು ಕ್ರಮ ತೆಗೆದುಕೊಳ್ಳಬೇಕು. ಆ ಬಗ್ಗೆ ಭಕ್ತರು ದೂರು ದಾಖಲಿಸಲಿ. ಸ್ವಾಮೀಜಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಘೋಷಿಸಿದ ಹೊತ್ತಲ್ಲೇ ಇಂಥ ವಿಡಿಯೊ ಹೇಗೆ ಬಿಡುಗಡೆ ಆಯಿತು? ಆ ವಿಡಿಯೊ ರೆಕಾರ್ಡ್ ಆಗಿರುವ ದಿನ ಯಾವುದು? ಹಳೆಯದಾಗಿದ್ದರೆ ಈವರೆಗೆ ಏಕೆ ಪ್ರಸಾರವಾಗಲಿಲ್ಲ? ಉತ್ತರಿಸಿ ಅಥವಾ ಬ್ರಾಹ್ಮಣರ ಹೋರಾಟ ಎದುರಿಸಿ.
ಪೇಜಾವರ, ಪಲಿಮಾರು, ಅದಮಾರು, ಪುತ್ತಿಗೆ, ಸೋದೆ, ಕಾಣಿಯೂರು, ಶಿರೂರು, ಕೃಷ್ಣಾಪುರ ಇವು ಅಷ್ಟ ಮಠಗಳು. ಪೇಜಾವರಕ್ಕೆ ವಿಶ್ವೇಶ ತೀರ್ಥರು, ಪಲಿಮಾರು ಮಠಕ್ಕೆ ವಿದ್ಯಾಧೀಶ ತೀರ್ಥರು, ಅದಮಾರು ವಿಶ್ವಪ್ರಿಯ ತೀರ್ಥ, ಪುತ್ತಿಗೆಗೆ ಸುಗುಣೇಂದ್ರ ತೀರ್ಥ, ಸೋದೆಗೆ ವಿಶ್ವವಲ್ಲಭ ತೀರ್ಥ, ಕಾಣಿಯೂರಿಗೆ ವಿದ್ಯಾವಲ್ಲಭ ತೀರ್ಥ, ಶಿರೂರು ಲಕ್ಷ್ಮೀವರ ತೀರ್ಥ, ಕೃಷ್ಣಾಪುರ ಮಠಕ್ಕೆ ವಿದ್ಯಾಸಾಗರ ತೀರ್ಥರು ಸ್ವಾಮಿಗಳಾಗಿದ್ದಾರೆ. ಆಯಾ ಮಠಕ್ಕೆ ನಡೆದುಕೊಳ್ಳುವ ಭಕ್ತರಿದ್ದಾರೆ. ಮೇಲಿನ ಪ್ರಶ್ನೆಗಳಿಗೆ ಉತ್ತರ ನೀಡ್ತೀರಾ? ಅಥವಾ ಇದೊಂದು ಅಭಿಯಾನದಂತೆ ಮಾಡುವ ಅನಿವಾರ್ಯಕ್ಕೆ ನೀವೇ ನಮ್ಮನ್ನು ಪ್ರೇರೇಪಿಸುತ್ತೀರಾ?’ ಎಂದು ಫೇಸ್ಬುಕ್ನಲ್ಲಿ ಪ್ರಶ್ನಿಸಲಾಗಿದೆ.
</p><p><strong>ಇದನ್ನೂ ಓದಿ...</strong></p><p>* <a href="http://www.prajavani.net/news/article/2018/03/14/559321.html#vuukle_div" target="_blank">‘ನನಗೆ ಮಕ್ಕಳಿದ್ದಾರೆ, ಅಷ್ಟ ಮಠಾಧೀಶರಿಗೂ ಮಕ್ಕಳಿದ್ದಾರೆ’</a></p></p>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.