ಸಿರುಗುಪ್ಪ: ತಾಲ್ಲೂಕಿನ ಉತ್ತನೂರು ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆಯನ್ನು ಶಾಸಕ ಬಿ.ಎಂ.ನಾಗರಾಜ ಬುಧವಾರ ಲೋಕಾರ್ಪಣೆ ಮಾಡಿದರು.
ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ‘ಗ್ರಾಮದಲ್ಲಿ 8ಎಕರೆ ಪ್ರದೇಶದಲ್ಲಿ ₹ 5ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಕೆರೆಯಲ್ಲಿ ನೀರು ತುಂಬಿದರೆ ಮಾಟಸೂಗೂರು, ಕೂರಿಗನೂರು, ಉತ್ತನೂರು ಗ್ರಾಮಗಳಲ್ಲಿ ಸಮಸ್ಯೆ ನೀಗಲಿದೆ ಎಂದರು.
‘ತಾಲ್ಲೂಕಿನ 27ಕೆರೆಗಳಲ್ಲಿ ನೀರಿನ ಸಂಗ್ರಹಣೆ ಮಟ್ಟದ ವರದಿಯನ್ನು ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿಯಿಂದ ಪಡೆದು ಕೆರೆಗಳನ್ನು ಭರ್ತಿ ಮಾಡಲು ಸೂಚಿಸಲಾಗಿದೆ. ಕೆಲವು ಕೆರೆಗಳಲ್ಲಿ ಅಂದಿನ ಕಾಲದ ಸಂಗ್ರಹಣೆಗಾಗಿ ಕಡಿಮೆ ವ್ಯಾಸದ ಪೈಪ್ಗಳನ್ನು ಅಳವಡಿಸಲಾಗಿದ್ದು, ಅವುಗಳನ್ನು ಮರು ನವೀಕರಣ ಮಾಡಲಾಗುವುದು’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೋಟೇಶ್ವರರೆಡ್ಡಿ, ಎಂಜಿನಿಯರ್ ಹನುಮಂತರೆಡ್ಡಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ, ಮುಖಂಡ ರಾದ ಜಬ್ಬರ್ಸಾಬ್, ಶಾಂಸುಂದರ್, ಮಾರುತಿರೆಡ್ಡಿ, ತಿಮ್ಮಪ್ಪ, ಡಿ. ರಂಗಪ್ಪ, ಬಿ.ಕೆ.ರಘು, ಕೋಟಿರೆಡ್ಡಿ, ಗೊರವರ ಶ್ರೀನಿವಾಸ ಇದ್ದರು.
ಚಾಲನೆ: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಶಾಸಕರು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬುಧವಾರ ಚಾಲನೆ ನೀಡಿದರು.
₹ 14 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸಮಾಲೋಚನ ಸಭಾ ಕೊಠಡಿಯನ್ನು ಉದ್ಘಾಟಿಸಿದರು.
ವರವಿನ ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಯಾತ್ರಿ ನಿವಾಸ್ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದರು. ಕಾಲೇಜು ಆವರಣದಲ್ಲಿ ಹೈದ್ರಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ₹15ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ 2ಕೊಠಡಿ ಹಾಗೂ ₹ 12 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಪ್ರೌಢಶಾಲೆಯ 2 ಕೊಠಡಿಗಳನ್ನು ಉದ್ಘಾಟಿಸಿದರು.