ಭೋಪಾಲ: ಸಮುದ್ರದ ನೀರನ್ನು ಶುದ್ಧೀಕರಿಸಿ ಐದು ಪೈಸೆಗೆ ಒಂದು ಲೀಟರ್ನಂತೆ ಕುಡಿಯುವ ನೀರು ವಿತರಿಸುವ ಯೋಜನೆ ದೇಶದಲ್ಲಿ ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮಧ್ಯ ಪ್ರದೇಶದ ಬಾಂದ್ರಭನ್ನಲ್ಲಿ ಎರಡು ದಿನಗಳ ‘ನದಿ ಮಹೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದ್ದ ಅವರು, ‘ಸಮುದ್ರದ ನೀರನ್ನು ಶುದ್ಧೀಕರಿಸಿ ಕುಡಿಯುವ ನೀರನ್ನಾಗಿ ಪರಿವರ್ತಿಸುವ ಯೋಜನೆ ಈಗಾಗಲೇ ತಮಿಳುನಾಡಿನ ತೂತುಕುಡಿಯಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿದೆ’ ಎಂದು ತಿಳಿಸಿದ್ದಾರೆ.
‘ದುರದೃಷ್ಟವಶಾತ್, ನದಿ ನೀರು ಹಂಚಿಕೆಗೆ ಸಂಬಂಧಿಸಿ ಕೆಲವು ರಾಜ್ಯಗಳು ಜಗಳವಾಡಿಕೊಳ್ಳುತ್ತಿವೆ. ಆದರೆ, ಪಾಕಿಸ್ತಾನಕ್ಕೆ ಹರಿದುಹೋಗುವ ನೀರಿನ ಬಗ್ಗೆ ಯಾರೂ ಚಿಂತಿತರಾಗಿಲ್ಲ’ ಎಂದು ಗಡ್ಕರಿ ಹೇಳಿದ್ದಾರೆ. ಪಾಕಿಸ್ತಾನದ ಜತೆ ಭಾರತ 6 ನದಿಗಳ ನೀರನ್ನು ಹಂಚಿಕೊಳ್ಳುತ್ತಿದೆ.
‘ಮೂರು ನದಿಗಳ ನೀರು ಪಾಕಿಸ್ತಾನಕ್ಕೆ ಹರಿದುಹೋಗುತ್ತಿದೆ. ಇದನ್ನು ತಡೆಯಲು ಯಾವ ಶಾಸಕರೂ ಆಗ್ರಹಿಸುತ್ತಿಲ್ಲ, ಯಾವ ಪತ್ರಿಕೆಯೂ ಬರೆಯುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.