ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷವು ಸ್ಥಳೀಯ ಹಾಗೂ ಸುಶಿಕ್ಷಿತ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಕಾಂಗ್ರೆಸ್ ಮುಖಂಡ ಬಿ. ಕೃಷ್ಣಪ್ಪ ಒತ್ತಾಯಿಸಿದರು.
ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2008ರಲ್ಲಿ ಆನೇಕಲ್ನ ಬಿ.ಶಿವಣ್ಣ ಹಾಗೂ 2013ರಲ್ಲಿ ಬ್ಯಾಟರಾಯನಪುರದ ಎ.ಸಿ.ಶ್ರೀನಿವಾಸ್ ಅವರಿಗೆ ಪಕ್ಷವು ಟಿಕೆಟ್ ನೀಡಿತ್ತು. ಹಾಗಾಗಿ ಎರಡು ಬಾರಿಯೂ ಸೋಲು ಕಂಡಿತ್ತು. ಈ ಬಾರಿಯಾದರೂ ಸ್ಥಳೀಯರಿಗೆ ಅವಕಾಶ ನೀಡಬೇಕು’ ಎಂದರು.
‘ಎ.ಸಿ. ಶ್ರೀನಿವಾಸ್ ಅವರಿಗೆ ಮತ್ತೆ ಟಿಕೆಟ್ ನೀಡಿದಲ್ಲಿ ಈ ಬಾರಿಯೂ ಕಾಂಗ್ರೆಸ್ಗೆ ಸೋಲು ಖಚಿತ’ ಎಂದು ಭವಿಷ್ಯ ನುಡಿದರು.
‘4 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ದೊಡ್ಡ ವಿಧಾನಸಭಾ ಕ್ಷೇತ್ರವಿದು. ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದವರ 1.5 ಲಕ್ಷಕ್ಕೂ ಹೆಚ್ಚು ಮತಗಳಿವೆ. ಹಲವಾರು ಸಮಾಜ ಸೇವಕರು ಹಾಗೂ ಸರ್ಕಾರದಲ್ಲಿ ಉನ್ನತ ಸ್ಥಾನ ಹೊಂದಿರುವ ಅಧಿಕಾರಿಗಳು ಇಲ್ಲಿ ನೆಲೆಸಿದ್ದಾರೆ. ಟಿಕೆಟ್ ನೀಡುವಾಗ ಅವರನ್ನೂ ಪರಿಗಣಿಸಬೇಕು’ ಎಂದರು.