ಬೆಂಗಳೂರು: ನಗರ ಜಿಲ್ಲೆಯಲ್ಲಿ 60 ಸಾವಿರ ಮತದಾರರ ಗುರುತಿನ ಚೀಟಿಗಳು ಸಿದ್ಧವಾಗಿವೆ. ಆದರೆ, ಅವು ಇನ್ನೂ ಮತದಾರರಿಗೆ ತಲುಪಿಲ್ಲ.
ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಸೋಮವಾರ ವಿಧಾನಸಭಾ ಚುನಾವಣೆ ಸಂಬಂಧ ಏಳು ಕ್ಷೇತ್ರಗಳ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿದರು. ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು. ಗುರುತಿನ ಚೀಟಿ ವಿತರಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಕಂದಾಯ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅವರು ಕಿಡಿಕಾರಿದರು.
‘ಪರಿಶೀಲನೆ ವೇಳೆ ಮತದಾರರ ಮನೆಗಳಿಗೆ ಬೀಗ ಹಾಕಲಾಗಿತ್ತು. ಕೆಲ ಮತದಾರರು ಆ ವಿಳಾಸದಲ್ಲಿ ಇರಲಿಲ್ಲ’ ಎಂದು ಕಂದಾಯ ಅಧಿಕಾರಿಗಳು ಸಮಜಾಯಿಷಿ ನೀಡಿದರು.
ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಜಿಲ್ಲಾಧಿಕಾರಿ, ‘ಈ ರೀತಿ ಕುಂಟು ನೆಪ ಹೇಳಬಾರದು. ನಿಯೋಜಿತ ಅಧಿಕಾರಿಗಳು ಗುರುತಿನ ಚೀಟಿ ವಿತರಿಸುವ ಕಾರ್ಯವನ್ನು ಚುರುಕುಗೊಳಿಸಬೇಕು. ಈ ಸಂಬಂಧ ವಾರದೊಳಗೆ ವರದಿ ಸಲ್ಲಿಸಬೇಕು. ಕರ್ತವ್ಯಲೋಪ ಎಸಗಿದರೆ ಶಿಸ್ತುಕ್ರಮ ಜರುಗಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಲು ಸಲ್ಲಿಕೆ ಆಗಿರುವ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು. ಅರ್ಜಿದಾರರ ವಾಸಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಈ ಕುರಿತು ತಹಶೀಲ್ದಾರರು ಉಸ್ತುವಾರಿ ವಹಿಸಬೇಕು ಎಂದು ಸೂಚಿಸಿದರು.
ಎಲ್ಲ ಮತಗಟ್ಟೆಗಳ ನಕ್ಷೆ ಮತ್ತು ಮತಗಟ್ಟೆ ಇರುವ ಪ್ರದೇಶದ ವಿವರಗಳನ್ನು ವೆಬ್ಸೈಟ್ಗೆ ಅಪ್ಲೋಡ್ ಮಾಡಬೇಕು ಎಂದರು.
ಮದ್ಯದಂಗಡಿಗಳು ಅವಧಿಮೀರಿ ವಹಿವಾಟು ನಡೆಸುವಂತಿಲ್ಲ. ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯ ಠಾಣೆಗಳ ವ್ಯಾಪ್ತಿಯ ರೌಡಿಗಳ ಪಟ್ಟಿ, ಗೂಂಡಾ ಹಾಗೂ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿದವರ ಪಟ್ಟಿಯನ್ನು ಸಲ್ಲಿಸು
ವಂತೆ ಪೊಲೀಸ್ ಅಧಿಕಾರಿಗಳಿಗೆ ಇದೇ ವೇಳೆ ಅವರು ಸೂಚನೆ ನೀಡಿದರು.