ಕುಶಾಲನಗರ: ಸಮೀಪದ ಹೆಬ್ಬಾಲೆಯಲ್ಲಿ ಯುಗಾದಿ ಹಬ್ಬದ ಹೊಸ ಸಂವತ್ಸರದ ಅಂಗವಾಗಿ ಮಂಗಳವಾರ ರೈತರು ಜನಪದ ಸಂಸ್ಕೃತಿಯ ಹೊನ್ನಾರು ಉತ್ಸವ (ಚಿನ್ನದ ಉಳುಮೆ)ವನ್ನು ಸಂಭ್ರಮದಿಂದ ಆಚರಿಸಿದರು.
ರೈತರು ರಾಸುಗಳನ್ನು ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಿ ಕೃಷಿ ಪರಿಕರಗಳಾದ ನೇಗಿಲು, ನೊಗ, ಎತ್ತಿನಗಾಡಿಗಳಿಗೆ ಪೂಜೆ ಸಲ್ಲಿಸಿದರು.
ಗ್ರಾಮದ ಬಸವೇಶ್ವರ ಯುವಕ ಸಂಘ ಮತ್ತು ಬನಶಂಕರಿ ದೇವಸ್ಥಾನ ಸಮಿತಿ ಆಶ್ರಯದಲ್ಲಿ ನಡೆದ ಉತ್ಸವದಲ್ಲಿ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ಜಾನುವಾರುಗಳಿಗೆ ಆರ್ಚಕ ಜಗದೀಶ್ ಸಾಮೂಹಿಕ ಪೂಜೆ ಸಲ್ಲಿಸಿದರು.
ನಂತರ ಪಂಚಾಂಗದಂತೆ ಗ್ರಾಮದ ರೈತ ವಿಶ್ವನಾಥ್ ಅವರು ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ 'ಹೊನ್ನಾರು' (ಚಿನ್ನದ ಉಳುಮೆ) ಹೂಡಿ ವರ್ಷಧಾರೆ ಉಳುಮೆಗೆ ಚಾಲನೆ ನೀಡಿದರು.
ದೇವಸ್ಥಾನದಿಂದ ಮಂಗಳವಾದ್ಯ ದೊಂದಿಗೆ ಮೆರವಣಿಗೆ ಹೊರಟ ಹೊನ್ನಾರು ಗಳು ಬನಶಂಕರಿ ದೇವಿಗೆ ಪ್ರದಕ್ಷಿಣೆ ಹಾಕಿ ಉಳುಮೆ ಆರಂಭಿಸಿದರು. ನಂತರ ಜಮೀನಿಗೆ ತೆರಳಿ ಉಳುಮೆ ಆರಂಭಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಎನ್.ಬಸವರಾಜ್, ಕಾರ್ಯದರ್ಶಿ ಎಚ್.ಪಿ.ರಾಜಪ್ಪ, ಖಜಾಂಜಿ ಎಚ್.ಎಸ್.ಬಸಪ್ಪ, ಉಪಾಧ್ಯಕ್ಷ ರಮೇಶ್, ಕಾಂತರಾಜ್, ಶಶಿಧರ್, ಸ್ವಾಮಿ, ಕಲ್ಯಾಣಾಪ್ಪ, ಚಂದ್ರಪ್ಪ, ಲೋೋಕೇಶ್, ತನುಕುಮಾರ್ ಇದ್ದರು. ಉತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ರೈತರಿಗೆ ಬಹುಮಾನ ವಿತರಿಸಲಾಯಿತು.