ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016ರಲ್ಲಿ ಮಂತ್ರಿಮಂಡಲ ಪುನರ್ರಚನೆ ಸಂದರ್ಭ ವಿವೇಚನಾ ಶಕ್ತಿ ಬಳಸದೆ ಅಸಮರ್ಥರನ್ನು ಆಯ್ಕೆ ಮಾಡಿದ್ದರು. ಪರಿಣಾಮಕಾರಿ ಮಂತ್ರಿಮಂಡಲದ ರಚನೆ ಹೆಸರಿನಲ್ಲಿ ಸ್ವಜನಪಕ್ಷಪಾತ ಮತ್ತು ಏಕಪಕ್ಷೀಯ ತೀರ್ಮಾನಗಳನ್ನು ತೆಗೆದುಕೊಂಡಿದ್ದರು.
–ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಅವರು ತಮ್ಮ ‘ಸ್ವಾಭಿಮಾನ ರಾಜಕಾರಣದ ಹಿನ್ನೆಲೆ ನಂಜನಗೂಡು ವಿಧಾನಸಭಾ ಉಪಚುನಾವಣೆ- ವಿಶ್ಲೇಷಣೆ’ ಪುಸ್ತಕದಲ್ಲಿ ಈ ರೀತಿ ಟೀಕೆ ಮಾಡಿದ್ದಾರೆ. ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಮೈಸೂರಿನಲ್ಲಿ ಬುಧವಾರ ಪುಸ್ತಕ ಬಿಡುಗಡೆ ಮಾಡಿದರು.
ಸಚಿವ ಸಂಪುಟದಿಂದ ಕೈಬಿಡುವಾಗ ಸಿದ್ದರಾಮಯ್ಯ ವರ್ತಿಸಿದ ರೀತಿ ಮತ್ತು ನಂಜನಗೂಡು ಉಪಚುನಾವಣೆಯಲ್ಲಿ ಹರಿದ ‘ಹಣದ ಹೊಳೆ’ ಬಗ್ಗೆ ಪುಸ್ತಕದಲ್ಲಿ ಎಳೆಎಳೆಯಾಗಿ ವಿವರಿಸಿದ್ದಾರೆ.
‘ಮಲ್ಲಿಕಾರ್ಜುನ ಖರ್ಗೆ ಅವರಷ್ಟೇ ಹಿರಿತನ ಹೊಂದಿರುವ ನನ್ನನ್ನು ಸಚಿವ ಸಂಪುಟದಿಂದ ಕೈಬಿಟ್ಟು, ಮೊದಲ ಬಾರಿ
ಆಯ್ಕೆಯಾದ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವರನ್ನಾಗಿ ಮಾಡಿದರು. ನನ್ನನ್ನು ಅವಮಾನಿಸಿದ್ದು ನಿಮಗೆ ಸರಿ ಎನಿಸುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.