ಚುನಾವಣೆ, ಮತದಾನ ಎಂಬ ಶಬ್ದಗಳು ಕಿವಿಗೆ ಬೀಳುತ್ತಿದ್ದಂತೆ ಥಟ್ಟನೆ ನೆನಪಾಗುವುದು ನಿಸಾರ್ ಅಹಮದ್ ಅವರ ಕವನ ‘ಕುರಿಗಳು ಸಾರ್ ಕುರಿಗಳು’.
ಕುರಿ ಮಂದೆ ಜೊತೆಜೊತೆಗೇ ಹಗಲಿರುಳು ಕುರಿಗಳನ್ನು ಸಾಕಿ ಸಲಹುವ, ಕರಿಯ ಕಂಬಳಿ ಹೊದ್ದ ಕುರುಬರ ಚಿತ್ರಣವೂ ಕಣ್ಣ ಮುಂದೆ ಮೂಡುತ್ತದೆ. ಚುನಾವಣಾ ಅರ್ಥದಲ್ಲಿ ಖಾದಿ ವಸ್ತ್ರಧಾರಿ ರಾಜಕಾರಣಿಗಳೇ ಈ ಕುರುಬರು.
ಪ್ರಸಕ್ತ ಅಧಿಕಾರದಲ್ಲಿರುವ ಪಕ್ಷವು ತಾನು ಕೊಟ್ಟ ಭರವಸೆಗಳನ್ನು ಈಡೇರಿಸಲು ತಿಣುಕಾಡುತ್ತಾ, ಹಲವು ಭಾಗ್ಯಗಳನ್ನು ಕರುಣಿಸುತ್ತಾ, ಬಹುತೇಕ ಭಾಗ್ಯಗಳನ್ನು ಭಾಗಶಃ ಈಡೇರಿಸುತ್ತಾ, ತಮ್ಮದು ನುಡಿದಂತೆ ನಡೆವ ಸರ್ಕಾರವೆಂದು ಬೀಗುತ್ತಾ, ಮತ್ತೆ ಅಧಿಕಾರ ಹಿಡಿಯುವ ಯತ್ನದಲ್ಲಿರುವುದು ಸಹಜವೇ ಸರಿ.
ವಿಧಾನಸಭೆ ಚುನಾವಣೆ ಈಗ ಸನಿಹದಲ್ಲಿದೆ. ನಾಲ್ಕಾರು ವರ್ಷಗಳಿಂದ ತಾವೇ ಸಾಕಿ ಸಲಹಿರುವ ಕುರಿಗಳು, ಮುಸ್ಸಂಜೆಯಲ್ಲಿ ಕೊಪ್ಪಲು ಸೇರುತ್ತವೆ ಎಂಬ ನಂಬಿಕೆ ಹುಸಿಯಾಗಬಹುದೇ ಎಂಬುದು ಪಕ್ಷಗಳನ್ನು ಆತಂಕಕ್ಕೆ ತಳ್ಳಿದೆ. ತಿಂದುಂಡು ಕೊಬ್ಬಿರುವ ಕುರಿಗಳು ತನ್ನ ‘ಕುರುಬ’ನನ್ನು ಮರೆತು, ಕೈಯಲ್ಲಿ ಹಿಡಿ ಸೊಪ್ಪನ್ನು ಹಿಡಿದು ಕರೆಯುವ ಕಟುಕನ ಸಮ್ಮೋಹನಕ್ಕೆ ಒಳಗಾಗಿ, ಅವನ ಹಿಂದೆ ಓಡುವವೇ... ಕಾದು ನೋಡಬೇಕು!