ಭುವನೇಶ್ವರ: ಒಡಿಶಾದ ಕೋರಾಪುಟ್ ಜಿಲ್ಲೆಯ ನಾರಾಯಣಪಟ್ಟಣ ವಲಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮಹಿಳಾ ನಕ್ಸಲರನ್ನು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದಾರೆ.
ನಾರಾಯಣಪಟ್ಟಣ ಅರಣ್ಯದಲ್ಲಿ ಭಾನುವಾರ ರಾತ್ರಿ ಜಿಲ್ಲಾ ಸ್ವಯಂ ಸೇವಾ ಪಡೆ (ಡಿವಿಎಫ್), ವಿಶೇಷ ಕಾರ್ಯಾಚರಣೆ ತಂಡ (ಎಸ್ಒಜಿ) ಕೂಂಬಿಂಗ್ ನಡೆಸಿದ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆರ್.ಪಿ ಶರ್ಮಾ ತಿಳಿಸಿದ್ದಾರೆ.
ಭದ್ರತಾ ಪಡೆಗಳನ್ನು ಕಂಡ ತಕ್ಷಣ ನಕ್ಸಲರು ಗುಂಡಿನ ದಾಳಿ ಆರಂಭಿಸಿದರು. ಎರಡೂ ಕಡೆಗಳಿಂದ ಚಕಮಕಿ ನಡೆದಿದ್ದು, ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಮೂವರ ಮೃತದೇಹಗಳನ್ನು ಭಾನುವಾರ ರಾತ್ರಿ ಹಾಗೂ ಒಂದು ಮೃತದೇಹವನ್ನು ಸೋಮವಾರ ಬೆಳಿಗ್ಗೆ ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿ ನಾಲ್ಕು ರೈಫಲ್, ಬ್ಯಾಗ್, ಸ್ಫೋಟಕಗಳು ಹಾಗೂ ನಕ್ಸಲ್ ಸಂಘಟನೆಗೆ ಸೇರಿದ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.