ಕಲಬುರ್ಗಿ: ದೇಶದ ಹಲವೆಡೆ ಮಹಾ ಪುರುಷರ ಪ್ರತಿಮೆ ಧ್ವಂಸಗೊಳಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಘಟಕದ ಸದಸ್ಯರು ನಗರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ಮಾಡಿದರು.
ತ್ರಿಪುರಾದ ಜನರು ಬದಲಾವಣೆ ಬಯಸಿ ಬಿಜೆಪಿಗೆ ಮತ ಹಾಕಿರಬಹುದು. ಹಾಗಂತ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಲೆನಿನ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಖಂಡನೀಯ. ಸುಬ್ರಮಣಿಯನ್ ಸ್ವಾಮಿ ಅವರು ಲೆನಿನ್ ಒಬ್ಬ ಭಯೋತ್ಪಾದಕ, ಅಂತಹ ವ್ಯಕ್ತಿಯ ಪ್ರತಿಮೆಯನ್ನು ಭಾರತದಲ್ಲಿ ಸ್ಥಾಪಿಸಬಾರದು ಎಂಬ ಹೇಳಿಕೆ ನೀಡುವ ಮೂಲಕ ಮೂರ್ಖತನ ಪ್ರದರ್ಶಿಸಿದ್ದಾರೆ. ಬೇರೆ ಪಕ್ಷದ ಸಿದ್ಧಾಂತ ಇಷ್ಟವಾಗದಿದ್ದರೆ ಸುಮ್ಮನಿರಬೇಕು. ಆದರೆ ಪ್ರತಿಮೆಗಳನ್ನು ಧ್ವಂಸಗೊಳಿ ಸುವುದು ಖಂಡನೀಯ ಎಂದರು.
ಪ್ರತಿಮೆಗಳನ್ನು ಭಗ್ನಗೊಳಿಸಿದ ಸಮಾಜ ಘಾತುಕ ಶಕ್ತಿಗಳನ್ನು ಕೂಡಲೇ ಪತ್ತೆ ಹಚ್ಚಬೇಕು. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಂಚಾಲಕ ಡಾ. ಮಲ್ಲೇಶಿ ಸಜ್ಜನ, ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ, ಜಿಲ್ಲಾ ಸಂಚಾಲಕರಾದ ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಕ್ರಾಂತಿ ಇದ್ದರು.