ನವದೆಹಲಿ: ಸಿಬಿಎಸ್ಇ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿ ಸೇರಿದಂತೆ ನಾನಾ ರಾಜ್ಯ ವಿದ್ಯಾರ್ಥಿಗಳು ಸಂಸತ್ತಿನ ಎದುರು ಪ್ರತಿಭಟನೆ ಕೈಗೊಂಡಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ.
ಈ ಮಧ್ಯೆ ಮೇಲಾಧಿಕಾರಿಗಳ ಸಂಧಾನಕ್ಕೂ ತಮ್ಮ ನಿಲುವನ್ನು ಸಡಿಲಿಸದ ವಿದ್ಯಾರ್ಥಿಗಳು ಸರ್ಕಾರ ತನಿಖೆಯ ಕುರಿತಾಗಿ ಲಿಖಿತ ಆದೇಶ ಹೊರಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿಯೂ ಪ್ರತಿಭಟನೆ ಕೈಗೊಂಡಿರುವ ವಿದ್ಯಾರ್ಥಿಗಳು, 'ಸರ್ಕಾರ ಕೇವಲ ಪೊಳ್ಳು ಭರವಸೆ ನೀಡುತ್ತಿದೆ. ಆದರೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಆರೋಪಿಸಿದ್ದಾರೆ.