ಬೆಂಗಳೂರು: ‘ಪದೇ ಪದೇ ಬಂದ್ಗೆ ಕರೆ ಕೊಡುವುದೇ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕೆಲಸ.ಕೋರ್ಟ್ ಆದೇಶಗಳಿದ್ದರೂ ಅವರು
ಲೆಕ್ಕಿಸುತ್ತಿಲ್ಲ. ವಾಟಾಳ್ ಕರೆಕೊಡುವ ಬಂದ್ಗಳಿಗೆ ರಾಜ್ಯ ಸರ್ಕಾರದ ಕುಮ್ಮಕ್ಕೂ ಇದೆ’ ಎಂದು ಬಂದ್ ಕರೆ ವಿರೋಧಿಸಿ ಸಲ್ಲಿಸಲಾಗಿರುವ ಅರ್ಜಿದಾರರ ಪರ ವಕೀಲರು ಹೈಕೋರ್ಟ್ಗೆ ದೂರಿದರು.
ವಾಟಾಳ್ ನಾಗರಾಜ್ ಬಂದ್ ಕರೆ ಆಕ್ಷೇಪಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರಹಾಜರಿದ್ದ ಎನ್.ಪಿ.ಅಮೃತೇಶ್, ಎಚ್.ಸುನೀಲ್ ಕುಮಾರ್, ದೀಪಕ್ ಶೆಟ್ಟಿ, ‘ವಾಟಾಳ್ ನಾಗರಾಜ್, ‘ಸರ್ಕಾರವನ್ನು ವಾಟಾಳ್ ನಾಗರಾಜ್ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಬಂದ್ ಕರೆಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಮಾಹೇಶ್ವರಿ, ‘ಈಗಾಗಲೇ ಇದೇ ನ್ಯಾಯಪೀಠ 2018ರ ಫೆಬ್ರುವರಿ 2ರಂದು ನೀಡಿರುವ ಆದೇಶದ ನಂತರ ಯಾರೂ ಯಾವುದೇ ಬಂದ್ ಕರೆ ಕೊಟ್ಟಿಲ್ಲ. ಬಂದ್ ಕರೆ ವಿಷಯದಲ್ಲಿ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂಬುದಕ್ಕೆ ನಿದರ್ಶನ ಇದ್ದರೆ ಅದನ್ನು ಕೋರ್ಟ್ ಗಮನಕ್ಕೆ ತನ್ನಿ’ ಎಂದರು.
‘ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿಯೇ ಬಂದ್ ಕರೆಯನ್ನು ಅಸಾಂವಿಧಾನಿಕ ಎಂದು ನಾವು ಪ್ರಜ್ಞಾಪೂರ್ವಕವಾಗಿ ಹೇಳಿದ್ದೇವೆ. ಯಾವುದೇ
ವ್ಯಕ್ತಿ, ಸಂಘ ಸಂಸ್ಥೆ ಬಂದ್ ಕರೆ ಕೊಡುವಂತಿಲ್ಲ ಎಂದೂ ಆದೇಶಿಸಿದ್ದೇವೆ.ಆದರೂ ಮತ್ತೆ ಮತ್ತೆ ಏಕೆ ಈ ವಿಷಯದಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಬಂದ್ ಕರೆಗಳ ಬಗ್ಗೆ ಸರ್ಕಾರ ಯಾವ ನಿಲುವು ಹೊಂದಿದೆ ಎಂಬುದನ್ನು ಲಿಖಿತ ರೂಪದಲ್ಲಿ ಸಲ್ಲಿಸಿ’ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಬುಧವಾರಕ್ಕೆ (ಏ.11) ಮುಂದೂಡಿದೆ.
ಕಾವೇರಿ ನದಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಏ.12ರಂದು ರಾಜ್ಯ ಬಂದ್ಗೆ ಕರೆ ನೀಡಿದ್ದನ್ನು ಪ್ರಶ್ನಿಸಿ ರಾಜಾಜಿನಗರದ ಶ್ರದ್ಧಾ ಪೋಷಕರ ಸಂಘದ ಅಧ್ಯಕ್ಷ ಸಿ.ರಾಜಾ ಸಲ್ಲಿಸಿರುವ ಅರ್ಜಿ ಇದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.