ನವದೆಹಲಿ: ಇಂಡಿಗೊ ವಿಮಾನದ ಸಿಬ್ಬಂದಿ, ಪ್ರಯಾಣಿಕರೊಬ್ಬರನ್ನು ಲಖನೌ ನಿಲ್ದಾಣದಲ್ಲಿ ಸೋಮವಾರ ಬಲವಂತವಾಗಿ ವಿಮಾನದಿಂದ ಇಳಿಸಿದ ಪ್ರಕರಣದ ತನಿಖೆಗೆ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರು ಮಂಗಳವಾರ ಆದೇಶಿಸಿದ್ದಾರೆ.
‘ಲಖನೌದಿಂದ ಬೆಂಗಳೂರಿಗೆ ಹೊರಡಬೇಕಿದ್ದ ಇಂಡಿಗೊ ವಿಮಾನದಲ್ಲಿ ಸೊಳ್ಳೆ ಇರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿ, ವಿಮಾನದಿಂದ ಬಲವಂತವಾಗಿ ಕೆಳಗಿಳಿಸಲಾಗಿದೆ’ ಎಂದು ಬೆಂಗಳೂರಿನ ವೈದ್ಯ ಸೌರಭ್ ರೈ ಆರೋಪಿಸಿದ್ದಾರೆ.
‘ಸೌರಭ್ ಅವರ ಆಕ್ಷೇಪವನ್ನು ನಾವು ಪರಿಗಣಿಸುವ ಮುನ್ನವೇ ಅವರು ಬೆದರಿಕೆಯ ಮಾತುಗಳನ್ನಾಡಿ ‘ಹೈಜಾಕ್’ ಪದ ಬಳಸಿದರು. ವಿಮಾನವನ್ನು ಹಾನಿಗೊಳಿಸುವಂತೆ ಸಹಪ್ರಯಾಣಿಕರನ್ನು ಪ್ರೇರೇಪಿಸಲು ಪ್ರಯತ್ನಪಟ್ಟರು’ ಎಂದು ವಿಮಾನ ಸಂಸ್ಥೆ ಸರಣಿ ಟ್ವೀಟ್ ಮಾಡಿದೆ. ಆದರೆ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿಲ್ಲ.
ಇದಕ್ಕೆ ಪ್ರತಿಯಾಗಿ ಸೌರಭ್ ಅವರು, ‘ನನ್ನ ಮೇಲೆ ಇಷ್ಟೆಲ್ಲ ಆರೋಪಗಳಿದ್ದರೆ ಇಂಡಿಗೊ ಸಿಬ್ಬಂದಿ ಏಕೆ ನನ್ನನ್ನು ಮತ್ತು ನನ್ನ ಚೀಲಗಳನ್ನು ತಪಾಸಣೆ ನಡೆಸಿಲ್ಲ. ಮತ್ತೊಂದು ವಿಮಾನದಲ್ಲಿ ಪ್ರಯಾಣ ಮಾಡಲು ಏಕೆ ಅವಕಾಶ ನೀಡಿದರು’ ಎಂದು ಪ್ರಶ್ನಿಸಿದ್ದಾರೆ.