ಕಲಬುರ್ಗಿ: ಪೊಲೀಸರು ಇಬ್ಬರು ದರೋಡೆಕೋರರ ಮೇಲೆ ನಗರದ ಹೊರವಲಯದ ಆಶ್ರಯ ಕಾಲೊನಿ ಬಳಿ ಗುರುವಾರ ಬೆಳಗಿನ ಜಾವ ಗುಂಡಿನ ದಾಳಿ ನಡೆಸಿದ್ದಾರೆ. ಗಾಯಗೊಂಡಿರುವ ಆರೋಪಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಆಳಂದ ಚೆಕ್ ಪೋಸ್ಟ್ ನಿವಾಸಿಗಳಾದ ಶೇಖರ್ ಮತ್ತು ಅಜೀಂ ಎಂಬುವರು ಕಳ್ಳತನಕ್ಕೆ ಬಂದಿದ್ದರು. ಈ ಕಾರ್ಯಾಚರಣೆಯಲ್ಲಿ ಕಾನ್ಸ್ಟೆಬಲ್ ಬಂದೇನವಾಜ್ ಹಾಗೂ ಭೀಮಾ ನಾಯ್ಕ್ ಗಾಯಗೊಂಡಿದ್ದಾರೆ. ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳ್ಳತನಕ್ಕೆ ಬಂದ ಶೇಖರ್ ಮತ್ತು ಅಜೀಂ ಅವರ ಮೇಲೆ ಪಿಎಸ್ಐಗಳಾದ ಪರಶುರಾಮ ಮತ್ತು ವಾಹೀದ್ ಕೊತ್ವಾಲ್ ಗುಂಡು ಹಾರಿಸಿದ್ದಾರೆ. ಆಗ ಆರೋಪಿಗಳು ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದರು.
‘ಆರೋಪಿಗಳು ದರೋಡೆ, ಕೊಲೆ ಯತ್ನ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕಲಬುರ್ಗಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.