ಬೆಂಗಳೂರು: ‘2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರೊ. ಬಿ.ಕೆ. ಚಂದ್ರಶೇಖರ್ ಸೋಲಿಗೆ ನಾನು ಕಾರಣ ಅಲ್ಲ. ಅವರ ಪರವಾಗಿ ನಾನು ಸಾಕಷ್ಟು ಪ್ರಚಾರ ನಡೆಸಿದ್ದೇನೆ’ ಎಂದು ಮಾಜಿ ಮೇಯರ್ ಕೆ.ಚಂದ್ರಶೇಖರ್ ಸ್ಪಷ್ಟಪಡಿಸಿದರು.
‘ನನ್ನ ಬೆಂಬಲಿಗರು ಕೆಟ್ಟ ಕೆಲಸ ಮಾಡಿಲ್ಲ. ಹೆಸರು ಕೆಡಿಸಿಕೊಂಡಿಲ್ಲ. ಐದು ವರ್ಷಗಳಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಇದನ್ನು ಸಹಿಸದ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಅವರು ಕಿಡಿಕಾರಿದರು.
ಬಸವನಗುಡಿ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ 10 ವರ್ಷಗಳಲ್ಲಿ ಕ್ಷೇತ್ರಕ್ಕೆ ಶಾಶ್ವತ ಎನಿಸುವ ಯಾವುದೇ ಕೆಲಸಗಳನ್ನು ಮಾಡಿಲ್ಲ ಎಂದು ದೂರಿದರು.
ಸಿದ್ದರಾಮಯ್ಯ ಸರ್ಕಾರ ಕ್ಷೇತ್ರಕ್ಕೆ ₹10 ಕೋಟಿ ಅನುದಾನ ನೀಡಿದ್ದರಿಂದಲೇ ರಸ್ತೆಗಳಿಗೆ ಟಾರು, ಮಳೆ ನೀರು ಹರಿಯುವ ಮೋರಿಗಳ ಸ್ವಚ್ಛತೆ ಸಾಧ್ಯವಾಗಿದೆ. ಆರು ವಾರ್ಡ್ಗಳಲ್ಲಿ ಬಿಜೆಪಿ ಸದಸ್ಯರಿದ್ದಾರೆ. ಅದ್ಭುತ ಕೆಲಸಗಳನ್ನು ಮಾಡುವ ಅವಕಾಶವಿತ್ತು. ಆದರೆ, ಮಾಡಲಿಲ್ಲ ಎಂದು ತಿಳಿಸಿದರು.
ಶಾಸಕರ ನಿಧಿ ಬಳಕೆಗೆ ಸಂಬಂಧಿಸಿದಂತೆ ರವಿಸುಬ್ರಹ್ಮಣ್ಯ ಶ್ವೇತಪತ್ರವನ್ನು ಹೊರಡಿಸಬೇಕು. ವಿದ್ಯಾಪೀಠ ಬಳಿ ಮೇಲುರಸ್ತೆ ಮಾಡಿಸುವುದಾಗಿ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಅದು ಈಡೇರಿಸಲಿಲ್ಲ. 500 ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದಾಗಿ ಹೇಳಿದ್ದಾರೆ, ಅವು ಎಲ್ಲಿವೆ ಎಂಬುದನ್ನು ತೋರಿಸಲಿ ಎಂದೂ ತಿಳಿಸಿದರು.