ಶಹಾಪುರ: ಅಸಮಾನತೆಯ ತೊಳಲಾಟದಲ್ಲಿ ಬದುಕುತ್ತಿರುವ ವಿಷಮ ವಾತಾವರಣದಲ್ಲಿ ಮನುವಾದಿಗಳ ಸಂಕೋಲೆಯಲ್ಲಿ ಸಂವಿಧಾನ ಸಿಲುಕಿದ್ದು, ಹಾಗಾಗಿ ನಾವೆಲ್ಲರೂ ಇನ್ನೂ ಜಾಗೃತಗೊಳ್ಳಬೇಕಾಗಿದೆ’ ಎಂದು ಮೈಸೂರಿನ ಚಿಂತಕ ಹನಸೋಗೆ ಸೋಮಶೇಖರ ತಿಳಿಸಿದರು.
ಇಲ್ಲಿನ ಜಯಾ ಸಭಾಂಗಣದಲ್ಲಿ ಬುಧವಾರ ಡಾ.ಅಂಬೇಡ್ಕರ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಡಾ.ಅಂಬೇಡ್ಕರ ದೃಷ್ಟಿ ಹೊಸ ಸೃಷ್ಟಿ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದ ದಲಿತ ಬಂಧುಗಳು ಸಂವಿಧಾನವನ್ನು ಅರ್ಥೈಯಿಸಿಕೊಳ್ಳುವಲ್ಲಿ ವಿಫಲತೆಗೆ ಕಾರಣವಾಗಿದ್ದರಿಂದ ಡಾ.ಅಂಬೇಡ್ಕರ ದೃಷ್ಟಿಕೋನಗಳು ಮುಂದೆ ಸಾಗುತ್ತಿಲ್ಲ. ಸಾಮಾಜಿನ ನ್ಯಾಯದ ಕೊರತೆಯಿಂದ ನಾವು ಬಳಲುತ್ತಿದ್ದೇವೆ. ಮೀಸಲಾತಿಗೂ ಧಕ್ಕೆ ತರುವ ಯತ್ನವು ಅಧಿಕಾರಿ ವರ್ಗಗಳಿಂದ ತೆರೆಮರೆಯಲ್ಲಿ ಕಸರತ್ತು ನಡೆದಿದೆ. ದಲಿತ ಸಮುದಾಯ ಹಾಗೂ ಶೋಷಿತರು ಇನ್ನಷ್ಟು ಗಟ್ಟಿಯಾಗುವುದರ ಜತೆಯಲ್ಲಿ ಸಾಂಘಿಕ ಹೋರಾಟದ ಅಗತ್ಯವಾಗಿದೆ’ ಎಂದು ಅವರು ಪ್ರತಿಪಾದಿಸಿದರು.
ಗುರುಮಠಕಲ್ ಖಾಸಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಜನಪರ ಸೇವೆಯ ಹೆಸರಿನಲ್ಲಿ ಮನುವಾದಿಗಳು ಸಂವಿಧಾನದ ಆಶಯಕ್ಕೆ ಧಕ್ಕೆ ತರುತ್ತಿದ್ದಾರೆ. ಸಮಾಜ ಒಡೆದು ಮತ್ತೊಬ್ಬರ ಗಾಳವಾಗದೆ ಹಿಡಿಯಾಗಿ ಮುಷ್ಟಿಯಾಗಬೇಕು. ದಲಿತ ಸಮುದಾಯಗಳು ಒಗ್ಗೂಡಿ ಸಂವಿಧಾನದ ಆಶಯಗಳನ್ನು ರಕ್ಷಿಸುವ ರಕ್ಷಾಕವಚವಾಗಿ ನಿಲ್ಲಬೇಕು’ ಎಂದರು.
ಡಾ.ಅಂಬೇಡ್ಕರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಡಾ.ಚಂದ್ರಶೇಖರ ದೊಡ್ಮನಿ, ಡಾ.ಗಾಳೆಪ್ಪ ಪೂಜಾರಿ, ಡಾ,ಸುರೇಶ ಶರ್ಮಾ, ಭೀಮರಾಯ ಹೊಸ್ಮನಿ, ನಾಗಣ್ಣ ಬಡಿಗೇರ, ಚಂದ್ರು ಚಕ್ರವರ್ತಿ, ಬಾಬುರಾವ ಭೂತಾಳೆ, ರಾಘವೇಂದ್ರ ಹಾರಣಗೇರಾ, ರಾಹುಲ್ ನಾಟೇಕರ್, ಅಮರೇಶ ವಿಭೂತಿಹಳ್ಳಿ, ಲಕ್ಷ್ಮಣ ಬೇವಿನಹಳ್ಳಿ ಇದ್ದರು.