ನವದೆಹಲಿ: ಹಿರಿಯ ಕಲಾವಿದ ರಾಮ್ಕುಮಾರ್ (94) ಶನಿವಾರ ಮೃತಪಟ್ಟಿದ್ದಾರೆ. ಇಲ್ಲಿನ ವೇದ್ರಾ ಕಲಾ ಗ್ಯಾಲರಿ ಈ ಬಗ್ಗೆ ಇಮೇಲ್ ಮೂಲಕ ಹೇಳಿಕೆ ಬಿಡುಗಡೆ ಮಾಡಿದೆ. ‘ರಾಮ್ಕುಮಾರ್: ಎ ಜರ್ನಿ ವಿತ್ಇನ್’ ಎಂಬ ಜನಪ್ರಿಯ ಏಕವ್ಯಕ್ತಿ ಪ್ರದರ್ಶನವನ್ನು 1996ರಲ್ಲಿ ಇದೇ ಗ್ಯಾಲರಿ ಆಯೋಜಿಸಿತ್ತು.
‘ಭಾರತದ ಪ್ರಮುಖ ಕಲಾವಿದ ಹಾಗೂ ನಮ್ಮ ಆತ್ಮೀಯ ಗೆಳೆಯ ರಾಮ್ಕುಮಾರ್ ಅವರಿಗೆ ಅತ್ಯಂತ ನೋವಿನಿಂದ ಅಂತಿಮ ವಿದಾಯ ಹೇಳುತ್ತಿದ್ದೇವೆ. ಈ ಕಲಾ ಗ್ಯಾಲರಿಗೆ ಅವರೊಬ್ಬ ಉತ್ತಮ ಮಾರ್ಗದರ್ಶಿಯಾಗಿದ್ದರು. ನಮ್ಮಂತಹ ಹಲವಾರು ಗ್ಯಾಲರಿಗಳ ಹುಟ್ಟು ಹಾಗೂ ಬೆಳವಣಿಗೆಗೆ ಅವರ ಕೊಡುಗೆ ಅಪಾರ’ ಎಂದು ಗ್ಯಾಲರಿ ಹೇಳಿಕೊಂಡಿದೆ.
1960ರಲ್ಲಿ ಎಂ.ಎಫ್ ಹುಸೇನ್ ಅವರೊಂದಿಗೆ ವಾರಾಣಸಿ ಸುತ್ತಾಡಿದ ರಾಮ್ಕುಮಾರ್, ಅಲ್ಲಿನ ವರ್ಣಮಯ ಬದುಕಿನಿಂದ ಸ್ಫೂರ್ತಿಗೊಂಡು ಅಮೂರ್ತ ಚಿತ್ರಕಲೆಯನ್ನು ರಚಿಸಲು ಆರಂಭಿಸಿದರು. 1972ರಲ್ಲಿ ಪದ್ಮಶ್ರೀ ಹಾಗೂ 1986ರಲ್ಲಿ ಮಧ್ಯಪ್ರದೇಶ ಸರ್ಕಾರದಿಂದ ಕಾಳಿದಾಸ ಸನ್ಮಾನ ಪುರಸ್ಕೃತರಾಗಿದ್ದರು.