ನವದೆಹಲಿ: ಭವಿಷ್ಯದ ತಂಡ ಕಟ್ಟುವುದಕ್ಕಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ನಲ್ಲಿ ಆಡುತ್ತಿರುವ ಯುವ ಆಟಗಾರರ ಮೇಲೆ ಕಣ್ಣಿಟ್ಟಿದೆ.
ಕೇಂದ್ರೀಯ ಗುತ್ತಿಗೆ ಪದ್ಧತಿಯಲ್ಲಿ ಸೇರಿರದ ಒಟ್ಟು 23 ಆಟಗಾರರ ಮೇಲೆ ನೋಟ ಇರಿಸಿರುವ ಬಿಸಿಸಿಐ ಮೂರು ಗುಂಪುಗಳಲ್ಲಿ ಅವರನ್ನು ವಿಂಗಡಿಸಿದೆ. ಈ ಪೈಕಿ ಕೆಲವರನ್ನು ಯಾವುದೇ ಕ್ಷಣದಲ್ಲಿ ರಾಷ್ಟ್ರೀಯ ತಂಡಕ್ಕೆ ಕರೆಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಐಪಿಎಲ್ನಲ್ಲಿ ಅವರಿಗೆ ಹೆಚ್ಚು ಒತ್ತಡ ಬೀಳದಂತೆ ಗಮನ ನೀಡಲಾಗುತ್ತಿದೆ.
19 ವರ್ಷದೊಳಗಿನ ಆಟಗಾರರು, ಈ ಹಿಂದೆ 19 ವರ್ಷದೊಳಗಿವನರ ಟೂರ್ನಿಯಲ್ಲಿ ಆಡಿದವರು ಮತ್ತು ‘ಎ’ ತಂಡದ ಆಟಗಾರರ ಮೇಲೆ ನಿಗಾ ಇರಿಸಲಾಗಿದೆ. ಮಯಂಕ್ ಅಗರವಾಲ್, ಪೃಥ್ವಿ ಶಾ ಮತ್ತು ಶಿವಂ ಮಾವಿ ಈ ಪಟ್ಟಿಯಲ್ಲಿರುವ ಪ್ರಮುಖರು.
‘ಆಯ್ದ ಯುವ ಆಟಗಾರರನ್ನು ತನ್ನ ಆಸ್ತಿ ಎಂದು ಪರಿಗಣಿಸಿರುವ ಬಿಸಿಸಿಐ, ಐಪಿಎಲ್ ಅಭ್ಯಾಸದ ಸಂದರ್ಭದಲ್ಲಿ ಅವರ ಮೇಲೆ ಹೆಚ್ಚು ಒತ್ತಡ ಬೀಳದಂತೆ ನೋಡಿಕೊಳ್ಳುತ್ತಿದೆ. ಅಭ್ಯಾಸದ ಸಂದರ್ಭದಲ್ಲಿ ಈ ಆಟಗಾರರನ್ನು ಬಳಸಿಕೊಂಡ ರೀತಿಯ ಕುರಿತು ಪ್ರತಿ ಫ್ರಾಂಚೈಸ್ನ ಟ್ರೇನರ್ ಮತ್ತು ಫಿಸಿಯೊ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಮಾಹಿತಿ ನೀಡಬೇಕು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದರು.