ಬೆಂಗಳೂರು: ‘ನಗರದ ಅಭಿವೃದ್ಧಿ ಮತ್ತು ಮೂಲಸೌಲಭ್ಯಗಳ ಕುರಿತು ಮಾತನಾಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎಲ್ಲ ತಯಾರಿ (ಹೋಮ್ ವರ್ಕ್) ಮಾಡಿಕೊಳ್ಳಬೇಕು’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಲೇವಡಿ ಮಾಡಿದರು.
‘ಮೋದಿ ಮತ್ತು ಶಾಗೆ ಬೆಂಗಳೂರಿನ ಬಗ್ಗೆ ಏನು ಗೊತ್ತಿದೆ. ಈ ನಗರವನ್ನು ಬಿಜೆಪಿಯವರು ಗಾರ್ಬೇಜ್ ಸಿಟಿ ಮಾಡಿದ್ದರು. ನಾವು ಆಡಳಿತ ವಹಿಸಿಕೊಂಡ ಬಳಿಕ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿದ್ದೇವೆ’ ಎಂದು ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.
‘ಅಕ್ಕಪಕ್ಕದ ಹಳ್ಳಿಗಳನ್ನು ಸೇರಿಸಿ ಬೆಂಗಳೂರನ್ನು ವಿಸ್ತರಿಸಿದ್ದ ಬಿಜೆಪಿಯವರು, ಅಗತ್ಯ ಮೂಲಸೌಲಭ್ಯ ಸೌಲಭ್ಯ ಕಲ್ಪಿಸಿರಲಿಲ್ಲ’ ಎಂದೂ ದೂರಿದರು.
‘ಮುಖ್ಯಮಂತ್ರಿಗೆ ಯಾವುದೇ ಉಡುಗೊರೆ ಬಂದರೂ ಅದು ಸರ್ಕಾರಕ್ಕೆ ಸೇರುತ್ತದೆ. ತಮಗೆ ಉಡುಗೊರೆಯಾಗಿ ಸಿಕ್ಕಿದ ವಾಚ್ಗೆ ಸಿದ್ದರಾಮಯ್ಯ ತೆರಿಗೆ ಕಟ್ಟಿದ್ದಾರೆ. ಅದನ್ನು ಅವರು ಕ್ಯಾಬಿನೆಟ್ ಹಾಲ್ನಲ್ಲಿ ಇಟ್ಟಿದ್ದಾರೆ. ಈ ಬಗ್ಗೆ ಮಾತನಾಡುವ ಶಾ, ವಾಸ್ತವ ಅರ್ಥ ಮಾಡಿಕೊಳ್ಳಬೇಕು’ ಎಂದರು.
‘ಬಸವ ಜಯಂತಿ ದಿನ ಬಸವಣ್ಣನ ಪ್ರತಿಮೆಗೆ ಶಾ ಹಾಕಿದ ಹಾರ ಕೆಳಗೆ ಬಿದ್ದಿದೆ. ಬಸವಣ್ಣ ಕೂಡ ಶಾ ಕೈಯಿಂದ ಹಾರ ಹಾಕಿಸಿಕೊಳ್ಳಲಿಲ್ಲ’ ಎಂದು ವ್ಯಂಗ್ಯವಾಡಿದರು.