ಧಾರವಾಡ: ಹಿರಿಯ ರಂಗ ನಟ, ಭಾಸ್ಕರ ಹೊಸಮನಿ (64) ಕುಂದಗೋಳ ತಾಲ್ಲೂಕಿನ ಸಂಶಿಯಲ್ಲಿ ಶನಿವಾರ ತಡರಾತ್ರಿ ನಿಧನರಾದರು. ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.
ಗೋಕಾಕದ ಶಾರದಾ ಸಂಗೀತ ನಾಟಕ ಮಂಡಳಿಯ ಮಾಲೀಕರಾಗಿದ್ದ ಬಸವಣ್ಣೆಪ್ಪ ಹೊಸಮನಿ ಇವರ ತಂದೆ. ನಟನೆಗೆ ಪ್ರಸಿದ್ಧರಾಗಿದ್ದ ಭಾಸ್ಕರ ಅವರನ್ನು ‘ಉತ್ತರ ಕರ್ನಾಟಕದ ಗುಬ್ಬಿವೀರಣ್ಣ’ ಎಂದೇ ಕರೆಯಲಾಗುತ್ತಿತ್ತು.
ಶಿಶುನಾಳ ಶರೀಫ, ಬ್ರಿಟಿಷ್ ಅಧಿಕಾರಿಯ ಪಾತ್ರಕ್ಕೆ ಹೆಸರಾಗಿದ್ದ ಭಾಸ್ಕರ ತಮ್ಮ ಪಾತ್ರಕ್ಕೆ ತಾವೇ ಹಾಡುತ್ತಿದ್ದರು. ನಾಗಲಿಂಗ ಲೀಲೆ, ಸಿದ್ಧಾರೂಢರ ಮಹಾತ್ಮೆ, ಚಿಕ್ಕ ಸೊಸೆ, ಸಂಪತ್ತಿಗೆ ಸವಾಲ್, ವರ ನೋಡಿ ಹೆಣ್ಣು ಕೊಡು, ಸಂತ ಶಿಶುನಾಳ ಶರೀಫರ ಜೀವನಾಧಾರಿತ ನಾಟಕಗಳಲ್ಲಿ ಅಭಿನಯಿಸಿದ್ದರು.
‘ನಾಗಲಿಂಗ ಲೀಲೆ’ ಆರು ಸಾವಿರ ದಾಖಲೆ ಪ್ರದರ್ಶನ ಕಂಡಿತ್ತು. ಸಂಶಿಯಲ್ಲಿ ಭಾನುವಾರ ಅಂತ್ಯಕ್ರಿಯೆ ನಡೆಯಿತು.