ಕಾಶ್ಮೀರದಲ್ಲಿ ಪ್ರವಾಸಿಗರ ಬಸ್ ಮೇಲೆ ಕಲ್ಲು ತೂರಾಟ: ತಮಿಳುನಾಡಿನ ಯುವಕ ಸಾವು

ಶ್ರೀನಗರ: ಕಾಶ್ಮೀರ ಪ್ರವಾಸಕ್ಕೆ ಬಂದಿದ್ದ ತಮಿಳುನಾಡಿನ ಪ್ರವಾಸಿಗ ಕಲ್ಲು ತೂರಾಟದಲ್ಲಿ ಗಾಯಗೊಂಡು ಸೋಮವಾರ ಬೆಳಿಗ್ಗೆ ಕೋಮಾ ಸ್ಥಿತಿ ತಲುಪಿದ್ದರು. ರಾತ್ರಿ ಹೊತ್ತಿಗೆ ಅವರು ಮೃತಪಟ್ಟಿದ್ದಾರೆ.
ಚೆನ್ನೈನ 22 ವರ್ಷದ ಆರ್.ತಿರುಮಣಿ ಕಾಶ್ಮೀರ ಪ್ರವಾಸಕ್ಕೆ ಬಂದಿದ್ದರು. ಶ್ರೀನಗರದ ಹೊರವಲಯ ನರಬಾಲ್ನಲ್ಲಿ ಸೋಮವಾರ ಬೆಳಿಗ್ಗೆ ಪ್ರವಾಸಿಗರ ವಾಹನದ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಘಟನೆಯಲ್ಲಿ ಕಲ್ಲೇಟಿನಿಂದ ತೀವ್ರವಾಗಿ ಗಾಯಗೊಂಡ ತಿರುಮಣಿ ಅವರನ್ನು ಬೆಳಿಗ್ಗೆ 10:30ರ ಸುಮಾರಿಗೆ ಆಸ್ಪತ್ರೆಗೆ ಸೇರಿಸಲಾಯಿತು.
ಆದರೆ, ಕೋಮಾ ಸ್ಥಿತಿ ತಲುಪಿದ ಅವರು ರಾತ್ರಿ 8:30ರ ಸುಮಾರಿಗೆ ಮೃತಪಟ್ಟಿದ್ದಾಗಿ ಎನ್ಡಿಟಿವಿ ವೆಬ್ಸೈಟ್ ವರದಿ ಮಾಡಿದೆ.
ಗುಂಪುಗಳ ಕಲ್ಲು ತೂರಾಟದ ಘರ್ಷಣೆ ವೇಳೆ ಪ್ರವಾಸಿಗರ ಬಸ್ನಲ್ಲಿದ್ದ ತಿರುಮಣಿ ಗಾಯಗೊಂಡಿದ್ದರು. ಪ್ರವಾಸಿಗರು ಗುಲ್ಮಾರ್ಗ್ ಕಡೆ ಹೊರಟಿದ್ದರು. ಈ ಘಟನೆಯಲ್ಲಿ 19 ವರ್ಷದ ಸ್ಥಳೀಯ ಯುವತಿಯೂ ಗಾಯಗೊಂಡಿರುವುದಾಗಿ ಶ್ರೀನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ತಿರುಮಣಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶ್ರೀನಗರದ ಪೊಲೀಸ್ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ತಿರುಮಣಿ ಪೋಷಕರಿಗೆ ಸಾಂತ್ವನ ಹೇಳಿದರು.
‘ನಾಚಿಕೆಯಿಂದ ನನ್ನ ತಲೆ ಬಾಗಿದೆ. ಇದು ತುಂಬ ದುಃಖದ ಸಂಗತಿ’ ಎಂದು ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ದಕ್ಷಿಣ ಕಾಶ್ಮೀರದ ಸೋಫಿಯಾನ್ನಲ್ಲಿ ಕಳೆದ ವಾರ 50 ಮಕ್ಕಳಿದ್ದ ಶಾಲಾ ವಾಹನದ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಘಟನೆಯಲ್ಲಿ ಮಗುವೊಂದು ಗಾಯಗೊಂಡಿತ್ತು.
ಭದ್ರತಾ ಪಡೆಗಳೊಂದಿಗೆ ಪ್ರತಿಭಟನಾಕಾರರು ಕಾಶ್ಮೀರದಲ್ಲಿ ನಡೆಸುತ್ತಿರುವ ಕಲ್ಲುತೂರಾಟ ಘರ್ಷಣೆ ಇದೀಗ ಪ್ರವಾಸಿಗರು ಹಾಗೂ ಶಾಲಾ ವಾಹನದ ಕಡೆಗೂ ತಿರುಗಿರುವುದು ಸರ್ಕಾರದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಜಮ್ಮು–ಕಾಶ್ಮೀರದ ಆದಾಯದ ಬಹುಪಾಲು ಪ್ರವಾಸೋದ್ಯಮದಿಂದಲೇ ಬರುತ್ತಿದೆ.
We’ve killed a tourist by throwing stones at the vehicle he was travelling in. Let’s try and wrap our heads around the fact that we stoned a tourist, a guest, to death while we glorify these stone pelters & their methods.
— Omar Abdullah (@OmarAbdullah) May 7, 2018
‘ಪ್ರವಾಸಿಗರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಪ್ರವಾಸಿಗನನ್ನು ಕೊಂದಿದ್ದೇವೆ. ನಾವು ಒಬ್ಬ ಪ್ರವಾಸಿಗ, ಒಬ್ಬ ಅತಿಥಿಯ ಮೇಲೆ ಕಲ್ಲು ತೂರಿ ಸಾವಿಗೆ ನೂಕಿದ್ದೇವೆ...’ ಎಂದು ಟ್ವೀಟ್ ಮೂಲಕ ವಿಪಕ್ಷ ನಾಯಕ ಒಮರ್ ಅಬ್ದುಲ್ಲಾ ಘಟನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
This young man from Chennai died in my constituency & while I don’t support these goons, their methods or their ideology I’m deeply, deeply sorry that this happened at all & that too in an area I’ve been proud to represent since 2014.
— Omar Abdullah (@OmarAbdullah) May 7, 2018
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.