ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ರನ್ವೇ ಕಾಮಗಾರಿಗಾಗಿ ಮಣ್ಣು ತಂದು ಸುರಿಯಲಾಗುತ್ತಿದೆ. ಇದರಿಂದಾಗಿ ದೂಳಿನ ಕಣಗಳು ಗಾಳಿಯಲ್ಲಿ ಸೇರಿ, ಸಮೀಪದ ಊರುಗಳನ್ನು ಸಂಪೂರ್ಣ ದೂಳುಮಯವನ್ನಾಗಿಸಿವೆ.
ಬೆಟ್ಟಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಊರುಗಳು ವಿಮಾನ ನಿಲ್ದಾಣದ ಸುತ್ತಮುತ್ತ ಇವೆ. ವಿವಿಧೆಡೆಯಿಂದ ಟಿಪ್ಪರ್ಗಳಲ್ಲಿ ತಂದ ಮಣ್ಣನ್ನು ಸುರಿಯು
ವಾಗ ನೀರು ಸಿಂಪಡಿಸದೇ ಇರುವುದರಿಂದ, ಹಾರುವ ದೂಳಿನ ಕಣಗಳು ಪಕ್ಕದ ರೇಷ್ಮೆ ತೋಟಗಳಿಗೂ ಹಾನಿ ಉಂಟು ಮಾಡಿವೆ.
‘ರೇಷ್ಮೆ ಗಿಡದ ಎಲೆಗಳು ದೂಳು ಆಗಿದ್ದು, ಎಲೆ ತಿನ್ನುವ ಹುಳುಗಳು ಸಾವನ್ನಪ್ಪುತ್ತಿವೆ. ಕಷ್ಟಪಟ್ಟು ಸಾಕಿದ ರೇಷ್ಮೆ ಹುಳುಗಳನ್ನು ತಿಪ್ಪೆಗೆ ಹಾಕುವ ಪರಿಸ್ಥಿತಿ ಬಂದಿದೆ‘ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಇಡೀ ಊರಿನಲ್ಲಿ ದೂಳು ಆವರಿಸಿ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಕಿಟಕಿ, ಬಾಗಿಲು ತೆರೆದರೆ ಮನೆಯೊಳಗೂ ದೂಳು ಬರುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು .