ನವದೆಹಲಿ: ಉತ್ತರ ಪ್ರದೇಶದ ಕೈರಾನಾದ 73 ಮತ್ತು ಮಹಾರಾಷ್ಟ್ರದ ಭಂಡಾರಾ–ಗೋಂದಿಯಾದ 49 ಮತಗಟ್ಟೆಗಳಲ್ಲಿ ಬುಧವಾರ ಮರು ಮತದಾನ ನಡೆಯಲಿದೆ.
ಕೈರಾನಾ ಮತ್ತು ಭಂಡಾರಾ–ಗೊಂದಿಯಾ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಸೋಮವಾರ ನಡೆದ ಮತದಾನದ ವೇಳೆ ಮಯತಂತ್ರ ಮತ್ತು ವಿವಿಪ್ಯಾಟ್ಗಳ ಬಗ್ಗೆ ಶಂಕೆ ವ್ಯಕ್ತಪಡಿಸಿ ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು.
ವಿಧಾನಸಭಾ ಮತ್ತು ಲೋಕಸಭಾ ಉಪ ಚುನಾವಣೆಗೆ ಬಳಸಲಾದ 10,300 ವಿವಿಪ್ಯಾಟ್ಗಳ ಪೈಕಿ ಶೇ 10 ರಷ್ಟು ಯಂತ್ರಗಳಲ್ಲಿ ದೋಷ ಕಂಡುಬಂದಿದೆ. ಕೈರಾನಾ ಮತ್ತು ಭಂಡಾರಾ–ಗೊಂದಿಯಾ ಲೋಕಸಭಾ ಕ್ಷೇತ್ರಗಳಲ್ಲಿ ಈ ಪ್ರಮಾಣ ಶೇ 20ರಷ್ಟಿದೆ ಎಂದು ಆಯೋಗ ಹೇಳಿದೆ.
‘ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ದೋಷ ಇಲ್ಲ.ವಿವಿಪ್ಯಾಟ್ಗಳಲ್ಲಿ ದೋಷ ಕಾಣಿಸಿಕೊಂಡಿದೆ’ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಮತ ಎಣಿಕೆ ನಡೆಯಲಿದೆ.
ಸೂರ್ಯನ ನೇರ ಶಾಖ, ಹೆಚ್ಚಿನ ಉಷ್ಣತೆ, ದೂಳು ಮತ್ತು ನಿರ್ವಹಣೆಯಲ್ಲಿ ಲೋಪದಿಂದ ವಿವಿಪ್ಯಾಟ್ಗಳಲ್ಲಿ ದೋಷ ಕಂಡುಬಂದಿದೆ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.
ಅಖಿಲೇಶ್ ಟೀಕೆ: ‘ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ’ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.