ಸೊಲ್ಲಾಪುರ: ‘ನಮ್ಮ ಹಕ್ಕನ್ನು ಸಮಾವೇಶದ ಮೂಲಕ ಬೇಡುತ್ತಿದ್ದೇವೆ. ಇದಕ್ಕೆ ವಿರೋಧಿಸುವವರು ಲಿಂಗಾಯತ ಬಿರುಗಾಳಿಗೆ ಸಿಲುಕಿ ತರಗೆಲೆಗಳಂತೆ ಹಾರಿ ಹೋಗುತ್ತಾರೆ’ ಎಂದು ಕೂಡಲಸಂಗಮದ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಭಾನುವಾರ ಇಲ್ಲಿ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಲಿಂಗಾಯತ ಸ್ವತಂತ್ರ ಧರ್ಮದ ಹಕ್ಕೊತ್ತಾಯ ಸಮಾವೇಶದಲ್ಲಿ ಮಾತನಾಡಿದ ಅವರು, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
‘ಹೈದರಾಬಾದ್, ಮುಂಬೈ, ನವದೆಹಲಿಯಲ್ಲೂ ರ್ಯಾಲಿ ನಡೆಸಲಾಗುವುದು. ಮಾನ್ಯತೆ ಸಿಗುವ ತನಕವೂ ಹೋರಾಟ ನಡೆಯಲಿದ್ದು, ಸರ್ಕಾರ ಹಿಂದೇಟು ಹಾಕಿದರೆ ಸುಪ್ರೀಂಕೋರ್ಟ್ ಮೊರೆ ಹೋಗಲಿದ್ದೇವೆ’ ಎಂದು ತಿಳಿಸಿದರು.