ಮಂಗಳೂರು: ಪರಿಸರ ದಿನದ ಅಂಗವಾಗಿ ಗಿಡ ನೆಡುವುದು ಮುಖ್ಯವಲ್ಲ. ನೆಟ್ಟ ಗಿಡಗಳೊಂದಿಗೆ ಮಾತನಾಡುತ್ತ ಅವನ್ನು ಜೀವಂತವಾಗಿಸುವುದೂ ಅಷ್ಟೇ ಅಗತ್ಯ ಎಂದು ಪರಿಸರವಾದಿ ದಿನೇಶ್ ಹೊಳ್ಳ ಹೇಳಿದರು.
ನಗರದ ಸೇಂಟ್ ಅಲೋಶಿಯಸ್ ಪ್ರೌಢಶಾಲೆಯ ಶಾಲಾ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ‘ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಪ್ರಕೃತಿಯನ್ನು ನಾವು ನಾಶ ಮಾಡುತ್ತಿರುವ ವಿವಿಧ ಬಗೆಗಳನ್ನು ಬಿಡಿಸಿಟ್ಟ ಅವರು, ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸಬೇಕಾಗಿದೆ. ಮನುಷ್ಯನ ಅವೈಜ್ಞಾನಿಕ ಹಸ್ತಕ್ಷೇಪವೇ ಪರಿಸರ ನಾಶಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮುಖ್ಯೋಪಾಧ್ಯಾಯ ರೆ.ಫಾ. ಜೆರಾಲ್ಡ್ ಫುರ್ಟಾಡೊ, ಉಪಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಎಸ್. ವೇದಿಕೆಯಲ್ಲಿದ್ದರು. ಕಲಾ ಶಿಕ್ಷಕ ಜಾನ್ ಚಂದ್ರನ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರಂಗೋಲಿಯನ್ನು ರಚಿಸಿದ್ದರು. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ, ಪರಿಸರವನ್ನು ರಕ್ಷಿಸುವ ಸಂದೇಶ ಸಾರುವ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಶಿಕ್ಷಕಿಯರಾದ ಎಡ್ನಾ ಮಸ್ಕರೇನಸ್ ಹಾಗೂ ಶಲ್ಮಾ ಸಲ್ಡಾನ ಕಾರ್ಯಕ್ರಮ ಸಂಯೋಜಿಸಿದ್ದರು. ಶಿಕ್ಷಕಿ ರೆನ್ನಿವಾಸ್, ಮಂಜುನಾಥ್ ಸಹಕರಿಸಿದರು. ಹಿತಾಂಶ್ ಶೆಣೈ ನಿರೂಪಿಸಿದರು. ಶ್ರೀಲಕ್ಷ್ಮಿ ಸ್ವಾಗತಿಸಿದರು. ಓಂಕಾರ್ ವಂದಿಸಿದರು.
ವಿಕಾಸ ಕಾಲೇಜು
ಕಾಲೇಜಿನಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೀನುಗಾರಿಕೆ ಕಾಲೇಜಿನ ಡಾ.ಎಸ್.ಎಂ. ಶಿವಪ್ರಕಾಶ್ ಮಾತನಾಡಿ, ಪ್ರಕೃತಿಯನ್ನು ನಾಶ ಮಾಡಿದರೆ ಮರಳಿ ಪಡೆಯಲು ಅಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ಮಂಗಳೂರಿನ ಸುಮಾರು 50 ಶಾಲೆಗಳ ವಠಾರದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಆಶಯ ವ್ಯಕ್ತಪಡಿಸಿದರು.
ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್, ವಿಕಾಸ್ ಎಜ್ಯುಕೇಷನ್ ಟ್ರಸ್ಟ್ನ ಟ್ರಸ್ಟಿ ಜೆ. ಕೊರಗಪ್ಪ, ಸಂಚಾಲಕ ಡಾ. ಡಿ ಶ್ರೀಪತಿರಾವ್, ವಿಕಾಸ್ ಎಜ್ಯು ಸೊಲ್ಯುಷನ್ ನಿರ್ದೇಶಕ ಡಾ. ಅನಂತ್ಪ್ರಭು ಜಿ., ವಿಕಾಸ್ ವಿದ್ಯಾಸಂಸ್ಥೆಯ ಸಮನ್ವಯಾಧಿಕಾರಿ ಪಾರ್ಥಸಾರಥಿ ಪಾಲೆಮಾರ್, ಪ್ರಾಂಶುಪಾಲ ಟಿ. ರಾಜಾರಾಮ್ ರಾವ್ ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರುತಿ ಎಸ್. ಭಂಡಾರಿ ನಿರೂಪಿಸಿದರು.
ಲೂರ್ಡ್ಸ್ ಶಾಲೆ
ಪರಿಸರವನ್ನು ಸಂರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ ಆಗಿದೆ ಎಂದು ಲೂರ್ಡ್ಸ್ ಸೆಂಟ್ರಲ್ ಶಾಲೆಯ ಪ್ರಾಂಶುಪಾಲ ರೆ. ರಾಬರ್ಟ್ ಡಿಸೋಜ ಹೇಳಿದರು.
ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಶಾಲೆಯ ಪ್ರಾರ್ಥನಾ ಸಭೆಯಲ್ಲಿ 12ನೇ ತರಗತಿಯ ‘ಅ’ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು. ಯತಿನ್ ಸತೀಶ್, ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿದರು.
‘ಗಿಡಮರ ಬೆಳೆಸಿ, ಪರಿಸರ ಉಳಿಸಿ’. ‘ಹಸಿರೇ ನಮ್ಮ ಉಸಿರು’. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ‘ಮನೆಗೊಂದು ಮರ, ಊರಿಗೊಂದು ವನ’. ‘ಕಾಡಿದ್ದರೆ ಮಳೆ, ಮಳೆಯಿಂದ ಬೆಳೆ’ ಎಂಬ ಘೋಷ ವಾಕ್ಯಗಳನ್ನು ವಿದ್ಯಾರ್ಥಿಗಳು ಭಿತ್ತಿ ಪತ್ರದ ಮೂಲಕ ಪ್ರದರ್ಶಿಸಿ, ಘೋಷಿಸಿದರು. ಸೋನಾಲಿ ನಿರೂಪಿಸಿದರು. ಶಿಕ್ಷಕಿಯರಾದ ಹರ್ಷಿತಾ ಶೆಟ್ಟಿ, ಅನಿತಾ ಥಾಮಸ್ ಹಾಗೂ ಶಿಕ್ಷಕ ಐವನ್ ಮಸ್ಕರೇನ್ಹಸ್ ಸಹಕರಿಸಿದರು.
ಕೆಐಓಸಿಎಲ್
ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ ವತಿಯಿಂದ ಪರಿಸರ ದಿನದ ಅಂಗವಾಗಿ ಕಂಪನಿ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಸುಬ್ಬಾರಾವ್ ಅವರು, ಕಾವೂರಿನ ಕೆಐಓಸಿಎಲ್ ಟೌನ್ಶಿಪ್ ಆವರಣದಲ್ಲಿ ಸಸಿಗಳನ್ನು ನೆಟ್ಟರು.
ಮಹಾಪ್ರಬಂಧಕರಾದ ರಾಕಿ ಡಿಸೋಜ, ಗೋವಿಂದರಾಜ್ ಭಟ್, ದೇವಾನಂದ ಪೈ, ಉಪ ಮಹಾಪ್ರಬಂಧಕ ವಾದಿರಾಜ್ ರಾವ್, ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು. ನಂತರ ವನ್ಯಜೀವಿ ಸಂರಕ್ಷಕ ಸಮ್ಮಿಲನ ಶೆಟ್ಟಿ ಅವರಿಂದ ಪ್ರಕೃತಿಯಲ್ಲಿ ಚಿಟ್ಟೆಗಳ ಪಾತ್ರ ಕುರಿತು ಪ್ರಾತ್ಯಕ್ಷಿಕೆ ನಡೆಯಿತು.
ಕರಾವಳಿ ಕಾವಲು ಪಡೆ
ನಗರದ ಪಣಂಬೂರಿನಲ್ಲಿರುವ ಭಾರತೀಯ ಕರಾವಳಿ ಕಾವಲು ಪಡೆಯ ಪ್ರಧಾನ ಕಚೇರಿಯಲ್ಲಿ ‘ಪ್ಲಾಸ್ಟಿಕ್ ಮಾಲಿನ್ಯ ಹೊಡೆದೋಡಿಸಿ’ ಘೋಷವಾಕ್ಯದೊಂದಿಗೆ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಗಿಡ ನೆಡುವುದು, ಪರಿಸರದ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಯಿತು. ಸಮುದ್ರ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಭಾರತೀಯ ಅಂಗಾಂಗ ದಾನ ಪ್ರತಿಷ್ಠಾನದ ಅಧ್ಯಕ್ಷ ಲಾಲ್ ಗೋಯಲ್, ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ದೀಪಕ್ ಜ್ಯೋತಿ ಘಲ್ಡಿಯಾಲ್, ಕರಾವಳಿ ಕಾವಲು ಪಡೆಯ ಕಮಾಂಡರ್ ಎಸ್.ಎಸ್. ದಸಿಲ್ ಮಾತನಾಡಿ, ಪರಿಸರದ ಸಂರಕ್ಷಣೆಯಿಂದ ಮಾನವನಿಗೆ ಒಳಿತಾಗಲಿದೆ. ಕರಾವಳಿ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಕರಾವಳಿ ಕಾವಲು ಪಡೆ, ತನ್ನ ಕರ್ತವ್ಯದ ಜತೆಗೆ ಸಾಮಾಜಿಕ ಕಳಕಳಿಯನ್ನು ತೋರಿಸುತ್ತಿರುವುದು ಶ್ಲಾಘನೀಯ ಎಂದರು.
ಉಪ ಕಮಾಂಡೆಂಟ್ ದೀಪಿಕಾ ಧಿಮಾನ್, ಪ್ಲಾಸ್ಟಿಕ್ನಿಂದ ಆಗುವ ತೊಂದರೆಗಳ ಕುರಿತು ವಿವರಿಸಿದರು. ಕಮಾಂಡೆಂಟ್ ಗುಲ್ವಿಂದರ್ ಸಿಂಗ್ ಮಾತನಾಡಿದರು. ಕರಾವಳಿ ಕಾವಲು ಪಡೆಯ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
ಎನ್ಎಂಪಿಟಿ:
ನವಮಂಗಳೂರು ಬಂದರು ಮಂಡಳಿಯಲ್ಲಿ ಪರಿಸರ ದಿನಾಚರಣೆ ನಡೆಯಿತು. ಮುಖ್ಯ ಅತಿಥಿಗಳಾಗಿದ್ದ ಪರಿಸರವಾದಿ ಸುರೇಶ್ ಹೆಬ್ಳೀಕರ್ ಮಾತನಾಡಿ, ಮಳೆ ನೀರು ಸಂಗ್ರಹ, ನವೀಕರಿಸಬಹುದಾದ ಇಂಧನಗಳ ಬಳಕೆ ಸೇರಿದಂತೆ ಪರಿಸರದ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ತೊಡಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎನ್ಎಂಪಿಟಿ ಪ್ರಭಾರ ಅಧ್ಯಕ್ಷ ಸುರೇಶ್ ಪಿ. ಶಿರವಾಡಕರ್, ಬಂದರು ಮಂಡಳಿಯು ಹಸಿರೀಕರಣಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದೆ. ಬಂದರು ಮಂಡಳಿಯಲ್ಲಿ 5.2 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದರಿಂದ ಮಂಡಳಿಯ ಶೇ 90 ರಷ್ಟು ಇಂಧನದ ಅವಶ್ಯಕತೆ ಪೂರೈಕೆಯಾಗಿದೆ ಎಂದು ತಿಳಿಸಿದರು.
ಮುಖ್ಯ ಎಂಜಿನಿಯರ್ ಎಚ್.ಎನ್. ಅಶ್ವತ್ ಸ್ವಾಗತಿಸಿದರು. ಎಂಜಿನಿಯರ್ ಪಿ. ಶ್ರೀನಾಥ ವಂದಿಸಿದರು. ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಭಾಗ್ಯಲಕ್ಷ್ಮಿ ನಿರೂಪಿಸಿದರು.
ಕುಂಬಳೆ
ಮುಜುಂಗಾವು ವಿದ್ಯಾಪೀಠದಲ್ಲಿ ಗ್ರಾಮೋತ್ಥಾನ ಸಮಿತಿಯ ಸಹಕಾರ, ಸಹಾಯದಿಂದ ವಿಶ್ವಪರಿಸರ ದಿನಾಚರಣೆ ನಡೆಯಿತು.
ಅತಿಥಿಗಳಾಗಿ ಭಾಗವಹಿಸಿದ್ದ ಬ್ಲಾಕ್ ಪಂಚಾಯಿತಿ ಸದಸ್ಯ ಹಿಳ್ಳೆಮನೆ ಸತ್ಯಶಂಕರಭಟ್ಟರು, ಗ್ರಾಮೋತ್ಥಾನ ಸಮಿತಿಯ ಸಂಯೋಜಕ ಜೀವನ್ ಮಾತನಾಡಿದರು.
ವಿದ್ಯಾರ್ಥಿನಿ ಕೃತಿಕಾ ಮತ್ತು ಬಳಗದವರು ಪ್ರಾರ್ಥಿಸಿದರು. ಆಡಳಿತಾಧಿಕಾರಿ ಶ್ಯಾಂಭಟ್ ದರ್ಬೆಮಾರ್ಗ ನಿರೂಪಿಸಿದರು. ಗ್ರಾಮೋತ್ಥಾನ ಸಮಿತಿ ಸದಸ್ಯ ಅವಿನಾಶ್ ವಂದಿಸಿದರು. ಜೀವನ್ ಅವರು ಸಾಂಕೇತಿಕವಾಗಿ ಶಿಕ್ಷಕರು, ವಿದ್ಯಾರ್ಥಿಗಳಿಗೆ ಸಸಿ ವಿತರಿಸಿದರು. ನಂತರ ಶಾಲಾ ವಠಾರದಲ್ಲಿ ಹಲವಾರು ಗಿಡಗಳನ್ನು ನೆಡಲಾಯಿತು.
ಗುರುಪುರ
ಗ್ರಾಮ ಪಂಚಾಯಿತಿ ವತಿಯಿಂದ ಕಚೇರಿ ವಠಾರದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಯು.ಪಿ. ಇಬ್ರಾಹಿಂ ಗಿಡ ನೆಟ್ಟರು.
ಪಂಚಾಯಿತಿ ಅಧ್ಯಕ್ಷೆ ರುಕಿಯಾ ಹಾಗೂ ಮಾಜಿ ಅಧ್ಯಕ್ಷೆ ಪದ್ಮಿನಿ, ಸದಸ್ಯರಾದ ಯಶವಂತ ಶೆಟ್ಟಿ, ಮೋಹಿನಿ, ಉಮೈ ಭಾನು, ಗ್ಲಾಡಿಸ್ ಕ್ವಾಡ್ರಸ್, ಸೇಸಮ್ಮ, ಶೋಭಾ, ಅಹಮ್ಮದ್ ಬಾವ ಹಾಗೂ ಎ.ಕೆ. ಮುಸ್ತಾಫ, ಲೆಕ್ಕ ಸಹಾಯಕ ಇಸ್ಮಾಯಿಲ್, ಸಿಬ್ಬಂದಿ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಸ್ವಾಗತಿಸಿ, ನಿರೂಪಿಸಿದರು.
ಹೆಲ್ಡಿ ಕ್ಯಾಂಪಸ್
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ವತಿಯಿಂದ ‘ಹೆಲ್ದಿ ಕ್ಯಾಂಪಸ್’ ಅಭಿಯಾನ ಹರೇಕಳದ ಶಿಕ್ಷಣ ಸಂತ ಹಾಜಬ್ಬರ ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ಯಾಂಪಸ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಕೀರ್, ಪರಿಸರವನ್ನು ಉಳಿಸುವಲ್ಲಿ ವಿದ್ಯಾರ್ಥಿಗಳು ಬಹುಮುಖ್ಯವಾದ ಪಾತ್ರವನ್ನು ವಹಿಸಬೇಕು. ಈ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ 6 ವರ್ಷಗಳಿಂದ ಈ ಅಭಿಯಾನವನ್ನು ಕೈಗೊಂಡು ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುತ್ತ ಬಂದಿದೆ ಎಂದು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ರೂಪಾ ಮಾತನಾಡಿ, ಆಧುನಿಕ ಜೀವನದಿಂದ ಪರಿಸರ ನಾಶದ ಕುರಿತು ವಿವರಿಸಿದರು. ಅಭಿಯಾನದ ಭಾಗವಾಗಿ ವಿದ್ಯಾರ್ಥಿಗಳು ಸಸಿ ನೆಟ್ಟರು. ಕ್ಯಾಂಪಸ್ ಫ್ರಂಟ್ ಮಂಗಳೂರು ತಾಲ್ಲೂಕು ಘಟಕದ ಅಧ್ಯಕ್ಷ ಸಾಹುಲ್ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಕಾಸ ಕಾಲೇಜಿನಲ್ಲಿ ಪರಿಸರ ದಿನ
ಕಾಲೇಜಿನಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೀನುಗಾರಿಕೆ ಕಾಲೇಜಿನ ಡಾ.ಎಸ್.ಎಂ. ಶಿವಪ್ರಕಾಶ್ ಮಾತನಾಡಿ, ಪ್ರಕೃತಿಯನ್ನು ನಾಶ ಮಾಡಿದರೆ ಮರಳಿ ಪಡೆಯಲು ಅಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ಮಂಗಳೂರಿನ ಸುಮಾರು 50 ಶಾಲೆಗಳ ವಠಾರದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಆಶಯ ವ್ಯಕ್ತಪಡಿಸಿದರು.
ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್, ವಿಕಾಸ್ ಎಜ್ಯುಕೇಷನ್ ಟ್ರಸ್ಟ್ನ ಟ್ರಸ್ಟಿ ಜೆ. ಕೊರಗಪ್ಪ, ಸಂಚಾಲಕ ಡಾ. ಡಿ ಶ್ರೀಪತಿರಾವ್, ವಿಕಾಸ್ ಎಜ್ಯು ಸೊಲ್ಯುಷನ್ ನಿರ್ದೇಶಕ ಡಾ. ಅನಂತ್ಪ್ರಭು ಜಿ., ವಿಕಾಸ್ ವಿದ್ಯಾಸಂಸ್ಥೆಯ ಸಮನ್ವಯಾಧಿಕಾರಿ ಪಾರ್ಥಸಾರಥಿ ಪಾಲೆಮಾರ್, ಪ್ರಾಂಶುಪಾಲ ಟಿ. ರಾಜಾರಾಮ್ ರಾವ್ ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರುತಿ ಎಸ್. ಭಂಡಾರಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.