ಲಖನೌ: ‘ಕಾನೂನು ಸಚಿವಾಲಯ ಅಂಚೆ ಕಚೇರಿಯಲ್ಲ ಎಂದಾದರೆ, ಅದಕ್ಕೆ ಪೊಲೀಸ್ ಠಾಣೆಯಾಗುವ ಹಕ್ಕು ಸಹ ಇಲ್ಲ’ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನ್ಯಾಯಾಂಗಕ್ಕೆ ‘ಅಪಮಾನ’ ಮಾಡುತ್ತಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.
‘ನ್ಯಾಯಾಂಗದ ಜತೆಗೆ ಅಧಿಕಾರಿಗಳು ದುರ್ವರ್ತನೆ ತೋರುತ್ತಿರುವುದು ಸರಿಯಲ್ಲ. ಇದು ಕೇಂದ್ರ ಸರ್ಕಾರದ ಸ್ವೇಚ್ಛಾಚಾರ ಹಾಗೂ ನಿರಂಕುಶ ಮನೋಭಾವದ ಸೂಚನೆಯಾಗಿದೆ. ಬಿಜೆಪಿ ಸಚಿವರಿಗೆ ನ್ಯಾಯಾಂಗವನ್ನು ಗೌರವಿಸಲು ಸಾಧ್ಯವಿಲ್ಲದಿದ್ದರೆ ಕನಿಷ್ಠ ಅಗೌರವ ತೋರುವುದನ್ನು ನಿಲ್ಲಿಸಬೇಕು’ ಎಂದು ಮಾಯಾವತಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಹಾಗೂ 24 ಹೈಕೋರ್ಟ್ಗಳ ನ್ಯಾಯಮೂರ್ತಿಗಳ ನೇಮಕಾತಿಯನ್ನು ಕೇಂದ್ರ ಸರ್ಕಾರ ತಡೆಯುತ್ತಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ‘ಕೊಲಿಜಿಯಂ ಶಿಫಾರಸುಗಳನ್ನಷ್ಟೇ ಜಾರಿಗೊಳಿಸಲು ಕಾನೂನು ಸಚಿವರು ಅಥವಾ ಸಚಿವಾಲಯ ಅಂಚೆ ಕಚೇರಿಯಲ್ಲ.
ನ್ಯಾಯಮೂರ್ತಿಗಳ ನೇಮಕಾತಿ ಕುರಿತು ಸುಪ್ರೀಂ ಕೋರ್ಟ್ ಕೊಲಿಜಿಯಂ ನೀಡಿರುವ ಶಿಫಾರಸುಗಳನ್ನು ಮರುಪರಿಶೀಲಿಸುವಂತೆ ಅಧಿಕಾರಿಗಳು ಸೂಚಿಸಿದ್ದು ಗಂಭೀರವಾದ ಅಪರಾಧವಲ್ಲ’ ಎಂದು ಹೇಳಿದ್ದರು.
ಇದಕ್ಕೆ ಪ್ರತಿಯಾಗಿ ಮಾಯಾವತಿ ಅವರು ಈ ರೀತಿ ತಿರುಗೇಟು ನೀಡಿದ್ದಾರೆ.