ಬೆಂಗಳೂರು: ‘ಲೋಕಸಭಾ ಚುನಾವಣೆವರೆಗೆ ಸಮ್ಮಿಶ್ರ ಸರ್ಕಾರ ಭದ್ರ ಎಂಬ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಯ ಗೂಢಾರ್ಥ ನನಗೆ ಗೊತ್ತಿಲ್ಲ. ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೂ ಹೋಗುವುದಿಲ್ಲ. ಯಾವ ಉದ್ದೇಶದಿಂದ ಹೇಳಿಕೆ ನೀಡಿದ್ದಾರೆ ಎಂಬುದೂ ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಿ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅವರ ಕಾಲು ಎಳೆಯುವವರು ಯಾರು ಎಂಬುದು ನನಗಂತೂ ಗೊತ್ತಿಲ್ಲ. ಐದು ವರ್ಷ ಸುಸೂತ್ರವಾಗಿ ಆಡಳಿತ ನಡೆಸಬೇಕು ಎಂಬ ಉದ್ದೇಶದಿಂದ ಸಮ್ಮಿಶ್ರ ಸರ್ಕಾರ ರಚಿಸಿದ್ದೇವೆ. ಈ ಸರ್ಕಾರ ಉತ್ತಮ ಹಾಗೂ ಜನಪರ ಆಡಳಿತ ನೀಡಬೇಕು’ ಎಂದರು.
‘ನಿಗಮ ಮಂಡಳಿಗೆ ಅಧ್ಯಕ್ಷರ ಉಪಾಧ್ಯಕ್ಷರನ್ನು ಮೊದಲು ನೇಮಕ ಮಾಡುತ್ತೇವೆ. ಆಮೇಲೆ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ಅದು ಒಂದು ವಾರವೂ ಆಗಬಹುದು ಅಥವಾ ಎರಡು ವಾರವೂ ಮುಂದಕ್ಕೆ ಹೋಗ
ಬಹುದು. ಯಾವಾಗ ಎಂದು ಕರಾರುವಾಕ್ಕಾಗಿ ಹೇಳಲು ಸಾಧ್ಯವಿಲ್ಲ. ಇದು ರಾಜಕೀಯವಲ್ಲವೇ’ ಎಂದು ಅವರು ಪ್ರತಿಕ್ರಿಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಕುರಿತು ಕೇಳಿದ ಪ್ರಶ್ನೆಗೆ, ‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವೆಲ್ಲವನ್ನೂ ನೋಡಿಕೊಳ್ಳುತ್ತಾರೆ. ನಾನು ಸಮನ್ವಯ ಸಮಿತಿ ಅಧ್ಯಕ್ಷ ಅಷ್ಟೆ’ ಎಂದು ಹೇಳಿದರು.
‘ಬಡ್ತಿ ಮೀಸಲಾತಿ ಮಸೂದೆಗೆ ಸಹಿ ಹಾಕಿದ್ದಕ್ಕೆ ರಾಷ್ಟ್ರಪತಿ ಅವರಿಗೆ ಧನ್ಯವಾದಗಳು. ಸಾಮಾಜಿಕ ನ್ಯಾಯ ಕಾಪಾಡಲು ಈ ಮಸೂದೆ ಅನಿವಾರ್ಯವಾಗಿತ್ತು. ಈ ಬಗ್ಗೆ ಅಧ್ಯಯನಕ್ಕೆ ಆಗ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಸಮಿತಿ ರಚನೆ ಮಾಡಿದೆವು. ಅವರು ಮೂರು ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿದರು.’
‘ಸದನದಲ್ಲಿ ಚರ್ಚೆ ಮಾಡಿ ಮಸೂದೆ ರೂಪಿಸಿ ರಾಜ್ಯಪಾಲರಿಗೆ ಕಳುಹಿಸಿದೆವು. ಅವರು ಸಹಿ ಹಾಕದೆ ರಾಷ್ಟ್ರಪತಿಗೆ ಕಳುಹಿಸಿದರು. ರಾಷ್ಟ್ರಪತಿ ಅವರು ಚುನಾವಣೆಗೆ ಮೊದಲೇ ಇದಕ್ಕೆ ಸಹಿ ಹಾಕಿದರೆ ನಮ್ಮ ಪಕ್ಷಕ್ಕೆ ರಾಜಕೀಯವಾಗಿ ಅನುಕೂಲವಾಗುತ್ತಿತ್ತು. ಕೇಂದ್ರ ಗೃಹ ಸಚಿವಾಲಯದವರು ಚುನಾವಣೆ ಮುಗಿಯುವರೆಗೆ ಕಾದು ಕಡತವನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಿದರು’ ಎಂದು ಹೇಳಿದರು.