ವರುಣಾ: ಕಬಿನಿ ಜಲಾಶಯದಿಂದ ಕಪಿಲಾ ನದಿಗೆ ನೀರು ಬಿಟ್ಟ ಪರಿಣಾಮ ಶನಿವಾರ ನದಿ ತೀರದ ಗ್ರಾಮಗಳಲ್ಲಿನ ಭತ್ತ, ಕಾಕಡಾ ಹೂವು, ಟೊಮೆಟೊ ಬೆಳೆಗಳು ಜಲಾವೃತವಾಗಿದೆ.
ಕಪಿಲಾ ನದಿ ತೀರದ ಗ್ರಾಮಗಳಾದ ತುಂನೇರಳೆ, ಹೊಸಕೋಟೆ, ಬಿಳುಗಲಿ, ಸುತ್ತೂರು, ನಂದಿಗುಂದ, ಎಡಕೊಳ, ಸಿದ್ದರಾಮನಹುಂಡಿ, ಕುಪ್ಪರವಳ್ಳಿ ,ಬಸವಪುರ ಸರಗೂರು ಸೇರಿದಂತೆ ಹಲವು ಗ್ರಾಮಗಳ ಪ್ರದೇಶದ ಗದ್ದೆಗಳಿಗೆ ನೀರು ನುಗ್ಗಿದ್ದು ನೂರಾರು ಎಕರೆ ಪ್ರದೇಶದಲ್ಲಿನ ಬೆಳೆ ಹಾಳಾಗಿದೆ.
ಈ ಬಾರಿ ಭತ್ತದ ಬೆಳೆ ಕ್ವಿಂಟಲ್ಗೆ ಕಳೆದ ವರ್ಷ ₹ 2,600 ಇತ್ತು. ಈ ವರ್ಷ ₹ 1,600 ನಿಗದಿ ಮಾಡಲಾಗಿದೆ. ದರ ಇಳಿದಿರುವುದು ರೈತರಲ್ಲಿ ನಿರಾಸೆ ಮೂಡಿದೆ.
ರೈತರ ಆಕ್ರೋಶ: ಕಳೆದ ವರ್ಷ ಎರಡು ಬೆಳೆ ಬಾರದೆ ಕಂಗಾಲಾಗಿದ್ದ ರೈತರು ಈ ಬೇಸಿಗೆಯಲ್ಲಿ ಭತ್ತ ಇನ್ನಿತರ ಬೆಳೆ ಬೆಳೆದಿದ್ದರು. ಆದರೆ, ಸತತ ಮಳೆ ಹಾಗೂ ನದಿಗೆ ನೀರು ಬಿಟ್ಟ ಪರಿಣಾಮ ಕೈಗೆ ಬಂದ ಬೆಳೆ ಒಕ್ಕಣೆ ಮಾಡಲು ಆಗುತ್ತಿಲ್ಲ ಎಂಬ ಬೇಸರ ಹಾಗೂ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಎರಡು ದಿನ ಮೊದಲೇ ಎಚ್ಚರಿಕೆ ನೀಡಿದ್ದರೆ ಭತ್ತ ಕೊಯ್ಲು ಮಾಡುತ್ತಿದ್ದವು ಎನ್ನುತ್ತಾರೆ ಎಡಕೊಳದ ಯಶೋದಮ್ಮ. ಇದೇ ರೀತಿ ನದಿ ಪ್ರವಾಹ ಹೆಚ್ಚಾದರೆ ಇನ್ನೂ ನೂರಾರು ಎಕರೆ ನೀರು ಪಾಲಾಗುವ ಭಯದಲ್ಲಿ ರೈತರಿದ್ದಾರೆ.
ಬೇಸಿಗೆಯಲ್ಲಿ ಕಾಲುವೆಗೆ ನೀರನ್ನು ಕೂಡ ಸರಿಯಾಗಿ ಬಿಡದೆ ಅಧಿಕಾರಿಗಳು ಸತಾಯಿಸುತ್ತಿದ್ದರು. ಈಗ ನೀರು ಬಂದು ಹಾನಿಯಾಗಿದೆ ಎನ್ನುತ್ತಾರೆ ನಂದಿಗುಂದ ಗ್ರಾಮದ ಬಸವಣ್ಣ.
ಮುಳುಗಡೆಯಾದ ಗದ್ದೆಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಹಾನಿಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ನಗರ್ಲೆಯ ಬಸವನಾಯ್ಕ ಸೇರಿದಂತೆ 30ಕ್ಕೂ ಹೆಚ್ಚು ರೈತರ ಕಾಕಡಾ ಬೆಳೆ ನೀರಿನಲ್ಲಿ ನಿಂತಿದೆ.