ಸುರಪುರ: ‘ನಗರೀಕರಣ ಬೆಳೆಯುತ್ತಿದ್ದಂತೆ ಕಾಡು ನಾಶವಾಗುತ್ತಿದೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೊಂದು ದಿನ ಪ್ರಾಣಿ ಸಂಕುಲ ನಾಶವಾಗುತ್ತದೆ’ ಎಂದು ವಲಯ ಅರಣ್ಯಾಧಿಕಾರಿ ಶಾಂತರೆಡ್ಡಿ ಹೊಸಳ್ಳಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ರುಕ್ಮಾಪುರ ಗ್ರಾಮದ ಕೊಟ್ಟೂರು ಬಸವೇಶ್ವರ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ನಡೆದ ಜಾಗತಿಕ ಪರಿಸರ ಹಾಗೂ ವನಮಹೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಶರಣಪ್ಪ ಕುಂಬಾರ ಅವರು, ಪರಿಸರ ಕುರಿತು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ತಿಳಿವಳಿಕೆ ನೀಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಂದ್ರನಾಯಕ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ಎನ್. ಭಂಡಾರೆ ಶಾಲಾ ಆವರಣದಲ್ಲಿ ಸಸಿ ನೆಟ್ಟರು.
ಶಾಲಾ ಮಕ್ಕಳಿಗೆ ಸಸಿ ವಿತರಿಸಲಾಯಿತು. ಭೀಮಾಬಾಯಿ ನಾರಾಯಣಪ್ಪ ಭಂಡಾರೆ ಸ್ಮರಣಾರ್ಥ ಉಚಿತ ಶಾಲಾ ಬ್ಯಾಗ್ಗಳನ್ನು ವಿತರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಸಿ.ಎನ್.ಭಂಡಾರೆ ಅವರು, ಐಐಟಿಯಲ್ಲಿ ರಾಜ್ಯಕ್ಕೆ ಎರಡನೆ ರ್ಯಾಂಕ್ ಗಳಿಸಿದ ರಾಕೇಶ ಕೊಪ್ರೇಶ್ ಹಳಿಜೋಳ ಅವರಿಗೆ ₹ 10 ಸಾವಿರ ನಗದು ನೀಡಿ ಗೌರವಿಸಿದರು.