ಇಲ್ಲಿನ ಕಾವೇರಿಪುರ (ಹಳೇ ಸಂತೆ ಮೈದಾನ) ಬಡಾವಣೆಯ ಕುಮಾರ್ ಅವರ ಮಗ ಮಾದೇಶ (10) ಹಾಗೂ ಪ್ರಭು ಅವರ ಮಗ ರಾಹುಲ್ ಅವರ ದೇಹ ಸ್ಥಿತಿ ದಿನದಿಂದ ದಿನಕ್ಕೆ ವಿಷಮಿಸುತ್ತಿದೆ. ಮಾದೇಶನಿಗೆ ಮಲಗಿದ ಸ್ಥಳದಿಂದ ಮಿಸುಕಾಡಲೂ ಆಗದ ಸ್ಥಿತಿ ಬಂದಿದೆ. ಮೈ ತುಂಬಾ ವ್ರಣ ಬಂದಿದ್ದು ನೋವು ತಾಳಲಾರದೇ ನರಳುತ್ತಿದ್ದಾನೆ. ಅನ್ನ, ನೀರು ಪೋಷಕರೇ ಕೊಡಬೇಕು. ಶೌಚಕಾರ್ಯ ಕೂಡ ಮಲಗಿದಲ್ಲೇ ಆಗುತ್ತಿದೆ. ‘ಅಮ್ಮಾ..’ ಎಂದು ಕೂಗಲು ಸಹ ಆಗದಷ್ಟು ಮಾದೇಶ ನಿತ್ರಾಣಗೊಂಡಿದ್ದಾನೆ. ದೇಹ ಕೆಂಪು ಬಣ್ಣಕ್ಕೆ ತಿರುಗಿದ್ದು, ಪರಿಚಿತರೇ ಗುರುತು ಹಿಡಿಯಲಾರದಷ್ಟು ರೂಪು ಬದಲಾಗಿದೆ.