ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ತಿಂಗಳಾದರೂ ನಡೆಯದ ಮೌಲ್ಯಮಾಪನ!

ಆರ್‌ಸಿಯು: ಪ್ರಕಟವಾಗದ ಎಂಬಿಎ 1 ಮತ್ತು 3ನೇ ಸೆಮಿಸ್ಟರ್ ಫಲಿತಾಂಶ
Last Updated 19 ಜೂನ್ 2018, 6:02 IST
ಅಕ್ಷರ ಗಾತ್ರ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಎಂಬಿಎ ಕೋರ್ಸಿನ 1ನೇ ಹಾಗೂ 3ನೇ ಸೆಮಿಸ್ಟರ್‌ ಪರೀಕ್ಷೆಗಳು ನಡೆದು 3ರಿಂದ 4 ತಿಂಗಳಾದರೂ ಫಲಿತಾಂಶ ಪ್ರಕಟವಾಗಿಲ್ಲ. ಫಲಿತಾಂಶ ತಿಳಿಯದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ವಿಶ್ವವಿದ್ಯಾಲಯವು ಬೆಳಗಾವಿ ಸೇರಿದಂತೆ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲಾ ವ್ಯಾಪ್ತಿ ಹೊಂದಿದೆ. ಮೂರು ಜಿಲ್ಲೆಗಳಲ್ಲಿ ಎಂಟು ಎಂಬಿಎ ಕಾಲೇಜುಗಳನ್ನು ಹೊಂದಿದ್ದು, ಸುಮಾರು 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದೇ ವರ್ಷದ ಫೆಬ್ರುವರಿ– ಮಾರ್ಚ್‌ ಅವಧಿಯಲ್ಲಿ ಪರೀಕ್ಷೆಗಳು ನಡೆದಿದ್ದವು. ಸಾಮಾನ್ಯವಾಗಿ ಒಂದರಿಂದ ಒಂದೂವರೆ ತಿಂಗಳೊಳಗೆ ಫಲಿತಾಂಶ ಪ್ರಕಟವಾಗುತ್ತಿತ್ತು.

ಮೌಲ್ಯಮಾಪನವೇ ಆಗಿಲ್ಲ– ಆರೋಪ: ‘ಎಂಬಿಎ ಕೋರ್ಸಿನ ಕೆಲವು ವಿಷಯಗಳ ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನ ಇದು
ವರೆಗೆ ನಡೆದಿಲ್ಲ. ಅದೇ ಕಾರಣಕ್ಕಾಗಿ ಫಲಿತಾಂಶ ಪ್ರಕಟವಾಗಿಲ್ಲ. ಬಿಸಿನೆಸ್‌ ಡಾಟಾ ಅನಲೆಸಿಸ್‌ (ಸ್ಟಾಟಿಸ್ಟಿಕ್ಸ್), ಎಂಟರ್‌ಪ್ರನ್ಯುಶಿಪ್‌ ಡೆವಲಪ್‌ಮೆಂಟ್‌ ಹಾಗೂ ಮ್ಯಾನೇಜರಿಯಲ್‌ ಎಕನಾಮಿಕ್ಸ್‌ ವಿಷಯಗಳ ಮೌಲ್ಯಮಾಪನ ನಡೆದಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಎಂಬಿಎ ಉಪನ್ಯಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಸಲ ವಿಶ್ವವಿದ್ಯಾಲಯದ ಉಪನ್ಯಾಸಕರ ಜೊತೆ ಚರ್ಚಿಸದೇ ಹೊರಗಿನ ವಿಶ್ವವಿದ್ಯಾಲಯಗಳ ಉಪನ್ಯಾಸಕರಿಂದ ಪ್ರಶ್ನೆ ಪತ್ರಿಕೆಯನ್ನು ತಯಾರಿಸಲಾಗಿತ್ತು. ಅವರು ಆರ್‌ಸಿಯು ಪಠ್ಯಕ್ರಮವನ್ನು ನೋಡದೇ ತಮ್ಮ ವಿಶ್ವವಿದ್ಯಾಲಯದ ಪಠ್ಯಕ್ರಮದಂತೆ ಪ್ರಶ್ನೆಪತ್ರಿಕೆಯನ್ನು ರೂಪಿಸಿದ್ದರು. ಇದರಿಂದಾಗಿ 85 ಅಂಕಗಳ ಪೈಕಿ 55 ಅಂಕಗಳ ಪ್ರಶ್ನೆಗಳು ಆರ್‌ಸಿಯು ಪಠ್ಯಕ್ರಮದಿಂದ ಹೊರಗಿನದ್ದಾಗಿದ್ದವು. ಇದ
ರಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ಪರದಾಡಿದರು. ಹಲವು ಪ್ರಶ್ನೆಗಳಿಗೆ ಉತ್ತರಿಸಲಾಗಿರಲಿಲ್ಲ’ ಎಂದರು.

‘ವಿದ್ಯಾರ್ಥಿಗಳು ಈ ವಿಷಯವನ್ನು ಕುಲಸಚಿವರ (ಮೌಲ್ಯಮಾಪನ) ಗಮನಕ್ಕೆ ತಂದಿದ್ದರು. ವಿದ್ಯಾರ್ಥಿಗಳ ದೂರಿನ ಹಿನ್ನೆಲೆಯಲ್ಲಿ ಎಂಬಿಎ ವಿಭಾಗದ ಮುಖ್ಯಸ್ಥರನ್ನು ಬದಲಾಯಿಸಲಾಯಿತು. ಆದರೆ, 55 ಅಂಕಗಳ ಲೋಪವನ್ನು ಸರಿಪಡಿಸುವುದು ಹೇಗೆ ಎನ್ನುವುದು ತಿಳಿಯದೇ ಕುಲಸಚಿವರು ಮೌನಕ್ಕೆ ಶರಣಾಗಿದ್ದಾರೆ. ಇದೇ ಕಾರಣಕ್ಕೆ ಇದುವರೆಗೆ ಈ ವಿಷಯಗಳ ಮೌಲ್ಯಮಾಪನ ನಡೆದಿಲ್ಲ’ ಎಂದು ಅವರು ಹೇಳಿದರು.

ಸಿಂಡಿಕೇಟ್‌ ಸಭೆಯಲ್ಲೂ ಪರಿಹಾರ ಸಿಕ್ಕಿಲ್ಲ: ಇತ್ತೀಚೆಗೆ ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಯಲ್ಲೂ ಎಂಬಿಎ ಫಲಿತಾಂಶದ ಬಗ್ಗೆ ತೀವ್ರ ಚರ್ಚೆಯಾಗಿದೆ. ಈ ವಿಷಯಗಳ ಪರೀಕ್ಷೆಯನ್ನು ಪುನಃ ನಡೆಸಬೇಕೆ? ಅಥವಾ ಗ್ರೆಸ್‌ ಮಾರ್ಕ್ಸ್‌ ನೀಡಬೇಕೆ? ಎನ್ನುವುದರ ಬಗ್ಗೆ ಚರ್ಚೆಯಾಯಿತು. ಆದರೆ, ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೇ ಸಭೆ ಮುಕ್ತಾಯಗೊಂಡಿತ್ತು.

ಪ್ರವೇಶ ಪ್ರಕ್ರಿಯೆ ನಡೆದಿಲ್ಲ: 1 ಹಾಗೂ 3ನೇ ಸೆಮಿಸ್ಟರ್‌ಗಳ ಫಲಿತಾಂಶಗಳು ಪ್ರಕಟವಾಗದಿರುವ ಕಾರಣ 2 ಹಾಗೂ 4ನೇ ಸೆಮಿಸ್ಟರ್‌ಗಳ ಪ್ರವೇಶ ಪ್ರಕ್ರಿಯೆ ಇದುವರೆಗೆ ಆರಂಭವಾಗಿಲ್ಲ. ಆದರೆ, ಕೆಲವು ಕಾಲೇಜುಗಳು ಫಲಿತಾಂಶಕ್ಕಾಗಿ ಕಾಯದೇ ತರಗತಿಗಳನ್ನು ಆರಂಭಿಸಿ
ದ್ದಾರೆ. ವಿದ್ಯಾರ್ಥಿಗಳು ಕೂಡ ಹಾಜರಾಗುತ್ತಿದ್ದಾರೆ.

ಎಂಬಿಎ ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನ ನಡೆದಿದೆ. ಒಂದೆರಡು ದಿನಗಳಲ್ಲಿ ಪ್ರಕಟಿಸಲಾಗುವುದು
- ರಂಗರಾಜ ವನದುರ್ಗ, ಕುಲಸಚಿವ (ಮೌಲ್ಯಮಾಪನ) ಆರ್‌ಸಿಯು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT