ಯಾದಗಿರಿ: ಸಮಗ್ರ ಕೃಷಿ ಅಭಿಯಾನದಡಿ ‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಅಭಿಯಾನದ ಸಮಗ್ರ ಮಾಹಿತಿ ಹೊತ್ತ ಕೃಷಿ ರಥಗಳಿಗೆ ಗುರುಮಠಕಲ್ ಮತಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅವರು ಸೋಮವಾರ ಹಸಿರು ನಿಶಾನೆ ತೋರಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿಗೌಡ ಮಾಲಿ ಪಾಟೀಲ್ ಅನಪುರ, ಹತ್ತಿಕುಣಿ ಜಿಲ್ಲಾ ಪಂಚಾಯಿತಿ ಸದಸ್ಯ ಶಿವಲಿಂಗಪ್ಪ ಪುಟಗಿ, ಯರಗೋಳ ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಸುರೇಶ , ಜಿಲ್ಲಾಧಿಕಾರಿ ಜೆ.ಮಂಜುನಾಥ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತರಾವ್ ಕುಲಕರ್ಣಿ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಆರ್. ದೇವಿಕಾ ಅವರು ವಿವಿಧ ಯೋಜನೆಗಳ ಹಸ್ತ ಪ್ರತಿಗಳನ್ನು ಬಿಡುಗಡೆಗೊಳಿಸಿದರು. ಜಿಲ್ಲೆಯ ರೈತ ಮುಖಂಡರು, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಇದ್ದರು.
ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಇತರೆ ಇಲಾಖೆಗಳ ಸಮಗ್ರ ಮಾಹಿತಿನ್ನೊಳಗೊಂಡ ರಥವು ಜಿಲ್ಲೆಯ ಹದಿನಾರು ಹೋಬಳಿಯ ಎಲ್ಲಾ ಗ್ರಾಮಗಳಲ್ಲಿ ಸಂಚರಿಸಿ ಕೃಷಿ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಯೊಜನೆಗಳ ಮಾಹಿತಿಯನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಿದೆ.
ಮೂರನೇ ದಿನ ಹೊಬಳಿಯ ಕೇಂದ್ರ ಸ್ಥಾನದಲ್ಲಿ ಕೃಷಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳ ಕೃಷಿ ಉಪಕರಣಗಳ ವಸ್ತು ಪ್ರದರ್ಶನ ಹಾಗೂ ಕೃಷಿ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಜಂಟಿ ಕೃಷಿ ನಿದೇರ್ಶಕರು ತಿಳಿಸಿದರು.
ಯಾದಗಿರಿ ತಾಲ್ಲೂಕಿನ ಬಳಿಚಕ್ರ, ಸೈದಾಪುರ, ಕೊಂಕಲ್, ಹತ್ತಿಕುಣಿ ಹಾಗೂ ಗುರುಮಠಕಲ್ ಹೋಬಳಿ, ಸುರಪುರ ತಾಲ್ಲೂಕಿನ ಕೆಂಭಾವಿ, ಹುಣಸಗಿ, ಕಕ್ಕೇರಾ, ಕೊಡೇಕಲ್, ಸುರಪುರ ಹೋಬಳಿ ಜಾಗೃತಿ ಪ್ರಚಾರ ಕಾರ್ಯ ನಡೆಯಲಿದೆ.