ಗುವಾಹಟಿ: ತಿನ್ಸುಕಿಯಾ ಜಿಲ್ಲೆಯಲ್ಲಿ ಐವರು ಬಂಗಾಳಿ ಭಾಷಿಕರ ಹತ್ಯೆ ಖಂಡಿಸಿ ಶನಿವಾರ ಕರೆ ನೀಡಿಲಾಗಿದ್ದ ಅಸ್ಸಾಂ ಬಂದ್ಗೆ ಕೆಲವು ಭಾಗಗಳಲ್ಲಿ ಮಾತ್ರ ಜನಜೀವನ ಅಸ್ತವ್ಯಸ್ತವಾಗಿತ್ತು.
ಬಂಗಾಳಿ ಭಾಷಿಕರು ಹೆಚ್ಚಿರುವ ಬರಾಕ್ ವಾಲಿ ಹಾಗೂ ಬ್ರಹ್ಮಪುತ್ರಾ ವಾಲಿಗಳಲ್ಲಿ ಬೆಳಗ್ಗೆ 5 ಗಂಟೆಯಿಂದ ಬಂದ್ ಆರಂಭವಾಯಿತು. ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್ಗೆ ಕಾಂಗ್ರೆಸ್ ಬೆಂಬಲ ನೀಡಿತ್ತು.
ಸಿಲ್ಚಾರ್ನಲ್ಲಿ ಬಂದ್ ಆಚರಣೆಗೆ ಮುಂದಾದ ಕಾಂಗ್ರೆಸ್ ಶಾಸಕ ಕಮಲಾಖ್ಯ ಡೇ ಪುರಕಾಯಸ್ಥ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು. ದರಾಂಗ್ ಜಿಲ್ಲೆಯಲ್ಲಿ ರಸ್ತೆ ತಡೆ ನಡೆಸಲು ಮುಂದಾದ 17 ಜನರನ್ನು ವಶಕ್ಕೆ ಪಡೆಯಲಾಯಿತು.
ಹೊಜಾಯ್ ಜಿಲ್ಲೆಯ ಲಾಮ್ಡಿಂಗ್ನಲ್ಲಿ ರೈಲ್ವೆ ಹಳಿ ಮೇಲೆ ಜಮಾಯಿಸಿದ ಪ್ರತಿಭಟನಾಕಾರರು ಭದ್ರತೆ ನೀಡುವಂತೆ ಒತ್ತಾಯಿಸಿದರು. ಬ್ರಹ್ಮಪುತ್ರಾ ಎಕ್ಸ್ಪ್ರೆಸ್ ರೈಲು ತಡೆಯಲು ಮುಂದಾದರು. ರಸ್ತೆಯಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಲಾಯಿತು. ಅಂಗಡಿಗಳನ್ನು ಮುಚ್ಚಲಾಗಿತ್ತು.
ರಾಜಧಾನಿ ಗುವಾಹಟಿಯಲ್ಲಿ ಬಂದ್ ಪ್ರಭಾವ ಇರಲಿಲ್ಲ. ರಸ್ತೆ ಸಂಚಾರ ಸುಗಮವಾಗಿತ್ತು. ಶಾಲಾ, ಕಾಲೇಜು, ಬ್ಯಾಂಕ್ಗಳು ತೆರೆದಿದ್ದವು.