ನವದೆಹಲಿ : ಬೀಗಮುದ್ರೆ ಅಭಿಯಾನಕ್ಕೆ ತಾತ್ಕಾಲಿಕ ನಿಷೇಧ ಹೇರುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆಹೋಗಲು ದೆಹಲಿಯ ಆಮ್ಆದ್ಮಿ ಪಕ್ಷದ ಸರ್ಕಾರ ನಿರ್ಧರಿಸಿದೆ. ಈ ಕುರಿತಂತೆ ಬಿಜೆಪಿಯ ಮುಖಂಡರು ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜತೆಗೆ ನಡೆದ ಮಾತುಕತೆಯೂ ಯಾವುದೇ ನಿರ್ಧಾರಕ್ಕೆ ಬರಲು ವಿಫಲವಾಗಿದ್ದರಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಆಪ್ ಸರ್ಕಾರವು ಈ ವಿಚಾರವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ನೇತೃತ್ವದ ನಿಯೋಗದ ಸಭೆ ಬಹಿಷ್ಕರಿಸಿ ಹೊರನಡೆಯಿತು.
ಇದಾದ ಬಳಿಕ ಮಾತನಾಡಿದ ಕೇಜ್ರಿವಾಲ್, ‘ ಸಭೆಯಲ್ಲಿ ಬಿಜೆಪಿ ಭಾಗವಹಿಸದಿರುವುದು ಬೇಸರ ಮೂಡಿಸಿದೆ. ‘ತಾತ್ಕಾಲಿಕ ನಿಷೇಧ’ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರವು ಸುಪ್ರೀಂಕೋರ್ಟ್ನಲ್ಲಿ ಮನವಿ ಸಲ್ಲಿಸಲಿದೆ’ ಎಂದು ಅವರು ತಿಳಿಸಿದರು.‘
’ ಬೀಗಮುದ್ರೆ ಅಭಿಯಾನವನ್ನು ರ್ಯಾಲಿಯಾಗಿ ಪರಿವರ್ತಿಸಲು ಕೇಜ್ರಿವಾಲ್ ಮುಂದಾದರು. ಇದು ನಿಜಕ್ಕೂ ಅಪಾಯಕಾರಿಯಾದ ಬೆಳವಣಿಗೆ. ಸಮಸ್ಯೆಗೆ ಪರಿಹಾರ ಹುಡುಕುವುದು ಅವರಿಗೆ ಇಷ್ಟವಿಲ್ಲ’ ಎಂದು ಮನೋಜ್ ತಿವಾರಿ ದೂರಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ, ’ಸಭೆ ನಡೆಯುತ್ತಿದ್ದ ವೇಳೆ ಆಮ್ಆದ್ಮಿ ಪಕ್ಷದ ಕಾರ್ಯಕರ್ತರು ಒಳಗೆ ಪ್ರವೇಶಿಸಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲು ಮುಂದಾದರು. ಈ ಕುರಿತಂತೆ ಆಮ್ಆದ್ಮಿ ಶಾಸಕರ ವಿರುದ್ಧ ಸಲ್ಲಿಸಲಿದ್ದೇನೆ’ ಎಂದರು.
*** ಬೀಗಮುದ್ರೆ ಅಭಿಯಾನ ಏನು ?
ದೆಹಲಿ ನಗರದ ಒಳಗೆ ಹಾಗೂ ಜನವಸತಿ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿರುವ ವ್ಯಾಪಾರ ಮಳಿಗೆಗಳಿಗೆ ದೆಹಲಿ ಮಹಾನಗರಪಾಲಿಕೆ ಕಳೆದ ತಿಂಗಳು ಬೀಗಮುದ್ರೆ ಹಾಕುವುದಕ್ಕೆ ‘ಬೀಗಮುದ್ರೆ ಅಭಿಯಾನ’ ಎಂದು ಕರೆಯಲಾಗುತ್ತದೆ.