ಲಖನೌ: ಟಿ20 ವಿಶ್ವಕಪ್ ತಂಡದ ಆಯ್ಕೆಗೆ ಕ್ಷಣಗಣನೆ ನಡೆಯುತ್ತಿರುವಂತೆ, ಕೆ.ಎಲ್.ರಾಹುಲ್ ಅವರು ತಂಡದಲ್ಲಿ ಎರಡನೇ ವಿಕೆಟ್ ಕೀಪರ್ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ತಂಡ ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್ ಪಂದ್ಯ ಆಡಲಿದ್ದು, ರಾಹುಲ್ ಅವರಿಗೆ ತಮ್ಮ ಸಾಮರ್ಥ್ಯ ತೋರಲು ಅಂತಿಮ ಅವಕಾಶ ಒದಗಿಸಿದೆ.
ಟಿ20 ಕ್ರಿಕೆಟ್ನಲ್ಲಿ ರಾಹುಲ್ ಅವರ ಸ್ಟ್ರೈಕ್ ರೇಟ್ ಬಗ್ಗೆ ಹಿಂದಿನಿಂದಲೂ ಚರ್ಚೆಯಿದೆ. ಪವರ್ಪ್ಲೇ ಅವಧಿಯಲ್ಲೂ ವೇಗದ ಆರಂಭ ನೀಡುತ್ತಿಲ್ಲ ಎನ್ನುವ ವಿಷಯವೂ ಹೊಸದಲ್ಲ. ಆದರೆ ಈ ಬಾರಿಯ ಐಪಿಎಲ್ನಲ್ಲಿ ಅವರು ಒಂದಿಷ್ಟು ಸುಧಾರಿತ ಪ್ರದರ್ಶನವನ್ನು ನೀಡಿದ್ದಾರೆ. 144.27ರ ಸ್ಟ್ರೈಕ್ರೇಟ್ನಲ್ಲಿ 378 ರನ್ ಗಳಿಸಿದ್ದಾರೆ. ಆದರೆ ರಿಷಭ್ ಪಂತ್ (160.60) ಮತ್ತು ಸಂಜು ಸ್ಯಾಮ್ಸನ್ (161.08) ಅವರ ಪ್ರದರ್ಶನ ಇನ್ನೂ ಉತ್ತಮವಾಗಿದೆ.
ರಸ್ತೆ ಅಪಘಾತದಲ್ಲಿ ಗಾಯಾಳಾದ ಮೇಲೆ ಐಪಿಎಲ್ ಮೂಲಕ ಪುನರಾಗಮನ ಮಾಡಿರುವ ಪಂತ್ ವಿಶ್ವಕಪ್ ತಂಡದ ಮೊದಲ ಕೀಪರ್ ಸ್ಥಾನವನ್ನು ಬಹುತೇಕ ಖಾತ್ರಿ ಪಡಿಸಿಕೊಂಡಿದ್ದಾರೆ. ವಿಕೆಟ್ ಕೀಪಿಂಗ್ನಲ್ಲೂ ಅವರು ಸೊಗಸಾದ ಪ್ರದರ್ಶನ ನೀಡಿದ್ದಾರೆ. ಸ್ಯಾಮ್ಸನ್ ಸಹ ಒತ್ತಡದ ಸಂದರ್ಭದಲ್ಲಿ ಬಿರುಸಿನ ಇನಿಂಗ್ಸ್ಗಳನ್ನು ಆಡಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗೆಲುವು ಕೊಡಿಸಿದ್ದಾರೆ.
ಪರಿಸ್ಥಿತಿ ಹೀಗಿರುವಾಗ, ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಬೇಕಾದರೆ ರಾಹುಲ್ ಅವರೂ ನಿರ್ಭೀತಿಯಿಂದ ಆಡಬೇಕಾಗಿದೆ.
ಇನ್ನೊಂದೆಡೆ ಪ್ಲೇ ಆಫ್ಗೆ ಪೈಪೋಟಿ ಜೋರಾಗಿದೆ. ಲಖನೌ ತಂಡದ ಬ್ಯಾಟಿಂಗ್, ಕ್ವಿಂಟನ್ ಡಿಕಾಕ್, ಮಾರ್ಕಸ್ ಸ್ಟೊಯಿನಿಸ್ ಮತ್ತು ನಿಕೋಲಸ್ ಪೂರನ್ ಅವರ ಆಟವನ್ನು ಅವಲಂಬಿಸಿದೆ. ಮುಂಬೈ ಬೌಲಿಂಗ್ ದೌರ್ಬಲ್ಯವನ್ನೂ ಬಳಸಲುಯ ಅವಕಾಶವಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಬೌಲಿಂಗ್ ದೌರ್ಬಲ್ಯ ಜಾಹೀರಾಗಿತ್ತು. ಅದರಲ್ಲೂ ಆಸ್ಟ್ರೇಲಿಯಾದ ಯುವ ಬ್ಯಾಟರ್ ಜೇಕ್ ಫ್ರೇಸರ್–ಮೆಕ್ಗುರ್ಕ್ ಎದುರಾಳಿ ದಾಳಿ ಲೆಕ್ಕಕ್ಕಿಲ್ಲದಂತೆ ಆಡಿದ್ದರು.
ಬಿಗುದಾಳಿಗೆ ಹೆಸರಾದ ಬೂಮ್ರಾ ಅವರೂ ದಂಡನೆಗೆ ಒಳಗಾಗಿದ್ದರು. ಲೂಕ್ ವುಡ್ ಮತ್ತು ಹಾರ್ದಿಕ್ ಪಾಂಡ್ಯ ಸುಧಾರಿತ ಪ್ರದರ್ಶನ ನೀಡಬೇಕಾಗಿದೆ. ಐದು ಸಲದ ಚಾಂಪಿಯನ್ ಮುಂಬೈ ಸದ್ಯ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ವಿಶ್ವಕಪ್ಗೆ ಮುನ್ನವೇ ಟಿ20ಯ ಪರಿಣತ ಆಟಗಾರ ಸೂರ್ಯಕುಮಾರ್ ಯಾದವ್ ಲಯಕ್ಕೆ ಮರಳಬೇಕಾಗಿದೆ.
ಪಂದ್ಯ ಆರಂಭ: ರಾತ್ರಿ 7.30.
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ ನೆಟ್ವರ್ಕ್ ಮತ್ತು ಜಿಯೊ ಸಿನಿಮಾ ಆ್ಯಪ್.
ಸೂರ್ಯಕುಮಾರ್ ಯಾದವ್
-ಪಿಟಿಐ ಚಿತ್ರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.