ಬೆಂಗಳೂರು: ಅಪರಾಧ ಪ್ರಕರಣಗಳ ಅತ್ಯುತ್ತಮ ತನಿಖೆಗಾಗಿ ಕೇಂದ್ರ ಗೃಹ ಸಚಿವಾಲಯ ಕೊಡಮಾಡುವ ಪದ ಕಗಳಿಗೆ 2019ನೇ ಸಾಲಿನಲ್ಲಿ, ಐಪಿಎಸ್ ಅಧಿಕಾರಿ ಎಂ.ಎನ್ ಅನುಚೇತ್ ಸೇರಿದಂತೆ ರಾಜ್ಯದ ಆರು ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.
ಕೇಂದ್ರ ಸರ್ಕಾರ ಈ ಪದಕಗಳಿಗೆ ವಿವಿಧ ರಾಜ್ಯಗಳ ಒಟ್ಟು 96 ಅಧಿಕಾರಿಗಳ ಹೆಸರನ್ನು ಸೋಮವಾರ ಪ್ರಕಟಿಸಿದೆ.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸಿರುವ ಎಸ್ಐಟಿ ತಂಡದಲ್ಲಿರುವ ಅನುಚೇತ್, ಡಿವೈಎಸ್ಪಿ ಟಿ.ರಂಗಪ್ಪ ಹಾಗೂ ಇನ್ಸ್ಪೆಕ್ಟರ್ ಜಿ.ಸಿ. ರಾಜು (ಸದ್ಯ ಮೈಸೂರಿನ ಕುವೆಂಪು ನಗರ ಠಾಣೆ ಇನ್ಸ್ಪೆಕ್ಟರ್) ಅವರಿಗೆ ಪದಕಗಳನ್ನು ನೀಡಲಾಗಿದೆ.
ಮಾನವ ಕಳ್ಳ ಸಾಗಣೆ ಪ್ರಕರಣ ಬಯಲಿಗೆಳೆದಿದ್ದ ಸಿಐಡಿಯಅಂದಿನ ಎಸ್ಪಿ ಎಸ್. ಜಾಹ್ನವಿ (ಸದ್ಯ ಕೋಲಾರ ಜಿಲ್ಲಾ ಹೆಚ್ಚುವರಿ ಎಸ್ಪಿ) ಹಾಗೂ ಡಿವೈಎಸ್ಪಿ ಕೆ. ರವಿಶಂಕರ್ ಅವರಿಗೆ ಪದಕಗಳು ದೊರೆತಿವೆ. ಮಾಲೂರಿನಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣದ ತನಿಖೆ ನಡೆಸಿದ್ದ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಸ್. ಸತೀಶ್ ಅವರೂ ಪದಕ ಪಡೆದ ಗೌರವಕ್ಕೆ ಪಾತ್ರರಾಗಿದ್ದಾರೆ.