ಗುವಾಹಟಿ (ಪಿಟಿಐ): ಅಸ್ಸಾಂನಲ್ಲಿ ಬುಡಕಟ್ಟು ಜನರ ನೆಲೆಗಳ ಮೇಲೆ ಬೋಡೊ ಉಗ್ರರು ಮಂಗಳವಾರ ರಾತ್ರಿ ನಡೆಸಿದ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 72ಕ್ಕೆ ಏರಿದೆ.
ಶಾಂತಿ ಮಾತುಕತೆಗೆ ವಿರೋಧ ವ್ಯಕ್ತಪಡಿಸಿರುವ ಬೋಡೊಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗದ (ಎನ್ಡಿಎಫ್ಬಿ) ಸಾಂಗ್ಬಿಜಿತ್ ಬಣಕ್ಕೆ ಸೇರಿದ ಭಾರಿ ಶಸ್ತ್ರಸಜ್ಜಿತ ಉಗ್ರರು ಸೋನಿತ್ಪುರ ಮತ್ತು ಕೋಕರಾಝಾರ್ ಜಿಲ್ಲೆಗಳಲ್ಲಿನ ಆದಿವಾಸಿಗಳ ನಾಲ್ಕು ಕುಗ್ರಾಮಗಳ ಮೇಲೆ ದಾಳಿ ನಡೆಸಿ ಸ್ಥಳೀಯರನ್ನು ಹತ್ಯೆ ಮಾಡಿದ್ದರು. ಘಟನೆಯಲ್ಲಿ ಸೋನಿತ್ಪುರ ಮತ್ತು ಕೋಕರಾಝಾರ್ನಲ್ಲಿ ಹೆಚ್ಚು ಸಾವು – ನೋವುಗಳು ಸಂಭವಿಸಿವೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಐಜಿಪಿ ಎಸ್.ಎನ್. ಸಿಂಗ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ರಾಜನಾಥ್ ಭೇಟಿ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಬುಧವಾರ ಸಂಜೆ ಇಲ್ಲಿಗೆ ಬಂದಿದ್ದಾರೆ. ಸಂತ್ರಸ್ತ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಲಿರುವ ರಾಜನಾಥ್, ತಕ್ಷಣವೇ ಸಿ.ಎಂ ತರುಣ್ ಗೊಗೋಯ್, ರಾಜ್ಯದ ಪೊಲೀಸ್ ಮಹಾನಿರ್ದೇಶಕ ಮತ್ತು ಭದ್ರತಾ ಪಡೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದರು.
ಅರೆಸೇನಾ ತುಕಡಿ: ರಾಜ್ಯದಲ್ಲಿ ಹಿಂಸಾಚಾರವು ಇನ್ನಷ್ಟು ಉಲ್ಬಣಿಸದಂತೆ ತಡೆಯಲು ಕೇಂದ್ರ ಸರ್ಕಾರ 5 ಸಾವಿರ ಅರೆಸೇನಾ ಸಿಬ್ಬಂದಿಯ ತುಕಡಿಗಳನ್ನು ರವಾನಿಸಿದೆ.
ಮುಖ್ಯಕಾರ್ಯದರ್ಶಿ ನಿರ್ಲಕ್ಷ್ಯ: ರಾಜ್ಯದಲ್ಲಿ ಜನಾಂಗೀಯ ಹಿಂಸೆ ನಡೆಯುತ್ತಿದ್ದರೂ, ಸರ್ಕಾರದ ಮುಖ್ಯ ಕಾರ್ಯದರ್ಶಿ ಜಿತೇಶ್ ಖೋಸ್ಲಾ
ಅವರು ಇಲ್ಲಿಂದ 200 ಕಿ.ಮೀ. ದೂರದ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಆನೆ ಸವಾರಿಯ ಸಡಗರದಲ್ಲಿರುವ ಸಂಗತಿ ಸ್ಥಳೀಯ ದೃಶ್ಯ ಮಾಧ್ಯಮಗಳು ಬಿತ್ತರಿಸಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಗೊಗೋಯ್ ಅವರು ಹತ್ಯೆ ಘಟನೆ ಗೊತ್ತಾಗುತ್ತಿದ್ದಂತೆಯೇ ಮುಖ್ಯ ಕಾರ್ಯದರ್ಶಿಯವರು ಪ್ರವಾಸ ಮೊಟಕುಗೊಳಿಸಿ ವಾಪಸ್ ಬರಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಡಕಟ್ಟು ಜನರ ಪ್ರತೀಕಾರ: ಉಗ್ರರ ದಾಳಿಯಿಂದ ಆಕ್ರೋಶಗೊಂಡು ಬುಧವಾರ ಪ್ರತಿಭಟನೆ ನಡೆಸಿದ ಬುಡಕಟ್ಟು ಜನರು ಪ್ರತೀಕಾರವಾಗಿ ಸೋನಿತ್ಪುರದಲ್ಲಿನ ಫುಲೊಗುರಿ ಪ್ರದೇಶದಲ್ಲಿ ಬೋಡೊ ಸಮುದಾಯಕ್ಕೆ ಸೇರಿದ ಐದು ಮನೆಗಳಿಗೆ ಹಾಗೂ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದರು. ಈ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಮೂವರು ಮೃತಪಟ್ಟಿದ್ದಾರೆ.
ಚಹಾ ತೋಟದ ಸಾವಿರಾರು ಕಾರ್ಮಿಕರು ಬಿಲ್ಲು ಮತ್ತು ಬಾಣಗಳನ್ನು ಹಿಡಿದು ಪ್ರತಿಭಟನಾ ರ್ಯಾಲಿಗಳನ್ನು ನಡೆಸಿದರು. ಸೋನಿತ್ಪುರದ ಧೆಕೈಜುಲಿ ಎಂಬಲ್ಲಿ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಗೆ ತಡೆಯೊಡ್ಡಿದರು. ಈ ಹಳ್ಳಿಗಳಿಗೆ ಸಮರ್ಪಕ ರಸ್ತೆ ಸಂಪರ್ಕವಿಲ್ಲದಿರುವುದರಿಂದ ಪರಿಶೀಲನಾ ಕಾರ್ಯಕ್ಕೆ ಅಡ್ಡಿಯುಂಟಾಗಿದೆ.
ದಾಳಿ ಕುರಿತು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ತೀವ್ರ ಆತಂಕ ವ್ಯಕ್ತಪಡಿಸಿದ್ದು, ‘ಪರಿಸ್ಥಿತಿ ಕೈ ಮೀರದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬೋಡೊ ಉಗ್ರರು ಅತ್ಯಂತ ಹೇಯ ಮತ್ತು ಕ್ರೂರ ದಾಳಿ ನಡೆಸಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಲು ದೊಡ್ಡಮಟ್ಟದಲ್ಲಿ ಕ್ರಮ ತೆಗೆದುಕೊಳ್ಳಬೇಕಿದೆ’ ಎಂದು ಗೊಗೋಯ್ ಹೇಳಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಕಟ್ಟೆಚ್ಚರ
ಇಟಾನಗರ: ಅಸ್ಸಾಂನಲ್ಲಿ ಹಿಂಸಾಚಾರ ತೀವ್ರಗೊಂಡಿರುವುದರಿಂದ ನೆರೆಯ ಅರುಣಾಚಲ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.