ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಬಕಾರಿ ನೀತಿ ಹಗರಣ: ಸಾಕ್ಷಿದಾರನಿಗೂ ಬಿಜೆಪಿಗೂ ಸಂಪರ್ಕವಿದೆ– ಎಎಪಿ

Published 30 ಮಾರ್ಚ್ 2024, 14:34 IST
Last Updated 30 ಮಾರ್ಚ್ 2024, 14:34 IST
ಅಕ್ಷರ ಗಾತ್ರ

ನವದೆಹಲಿ: ಅಬಕಾರಿ ನೀತಿ ಹಗರಣದ ಸಾಕ್ಷಿಗಳಲ್ಲಿ ಒಬ್ಬರಿಗೆ ಬಿಜೆಪಿ ಜತೆ ಸಂಪರ್ಕ ಇದೆ ಎಂದು ಆರೋಪಿಸಿರುವ ಎಎಪಿ, ಜಾರಿ ನಿರ್ದೇಶನಾಲಯವು ಈ ಕುರಿತೂ ತನಿಖೆ ನಡೆಸಲಿ ಸವಾಲು ಹಾಕಿದೆ.

ಈ ಪ್ರಕರಣದಡಿ ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರ ಮಗ ರಾಘವ ಮಾಗುಂಟ ರೆಡ್ಡಿ ಅವರನ್ನು ಇ.ಡಿ ಬಂಧಿಸಿತ್ತು. ಇದೀಗ ಬಿಜೆಪಿಯ ಮಿತ್ರ ಪಕ್ಷ ಟಿಡಿಪಿ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಕಣಕ್ಕೆ ಇಳಿಸಿದೆ ಎಂದು ದೆಹಲಿ ಸಚಿವರಾದ ಆತಿಶಿ ಮತ್ತು ಸೌರಭ್‌ ಭಾರದ್ವಾಜ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಇ.ಡಿ ಸ್ವತಂತ್ರ ತನಿಖಾ ಏಜೆನ್ಸಿಯೇ ಆಗಿದ್ದರೆ, ಈ ಕುರಿತು ದಾಖಲೆ ಸಂಗ್ರಹಿಸಿ, ತನಿಖೆ ನಡೆಸಲಿ ಎಂದು ಸವಾಲು ಹಾಕುತ್ತೇನೆ’ ಎಂದು ಹೇಳಿದ ಆತಿಶಿ ಅವರು, ಬಿಜೆಪಿಗೆ ಮದ್ಯ ವ್ಯಾಪಾರಿಗಳ ‘ಸೌಥ್‌ ಗ್ರೂಪ್‌’ ಲಾಬಿ ಜತೆ ಸಂಪರ್ಕ ಇದೆ ಎಂದು ಆರೋಪಿಸಿದರು.

ಮಾಗುಂಟ ಸೇರಿದಂತೆ ನಾಲ್ವರ ಹೇಳಿಕೆಗಳ ಆಧಾರದ ಮೇಲೆ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿದೆ ಎಂದ ಅವರು, ಇನ್ನೊಬ್ಬ ಸಾಕ್ಷಿ ಶರತ್‌ ರೆಡ್ಡಿ ಅವರು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ₹55 ಕೋಟಿ ಪಾವತಿಸಿದ್ದಾರೆ. ಇದು ಬಿಜೆಪಿಯು ‘ಸೌಥ್ ಗ್ರೂಪ್’ ಲಾಬಿಯೊಂದಿಗೆ ಸಂಪರ್ಕ ಹೊಂದಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದರು. 

ಜಾರಿ ನಿರ್ದೇಶನಾಲಯವು, ಕೇಜ್ರಿವಾಲ್‌ ವಿರುದ್ಧ ಹೇಳಿಕೆಗಳನ್ನು ನೀಡುವವರೆಗೂ ಸಾಕ್ಷಿಗಳಿಗೆ ಚಿತ್ರ ಹಿಂಸೆ ನೀಡುತ್ತಿದೆ ಎಂದು ಅವರು ಆರೋಪಿಸಿದರು. 

ಇದೇ ಪ್ರಕರಣದಲ್ಲಿ ದೆಹಲಿ ಸಾರಿಗೆ ಸಚಿವ ಕೈಲಾಶ್‌ ಗಹಲೋತ್‌ ಅವರನ್ನು ಇ.ಡಿ ಪ್ರಶ್ನಿಸಿದ್ದನ್ನು ಉಲ್ಲೇಖಿಸಿದ ಅವರು, ‘ನನಗೆ, ಭಾರದ್ವಾಜ್‌ ಅವರಿಗೆ ಮತ್ತು ಎಎಪಿ ಇತರ ನಾಯಕರಿಗೆ ಸಮನ್ಸ್‌ ನೀಡಬಹುದು ಮತ್ತು ಬಂಧಿಸಬಹುದು. ಆದರೆ ನಮಗೆ ಜೈಲಿಗೆ ಹೋಗಲು ಭಯವಿಲ್ಲ’ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT