ಸಿಎಂ ಶಿಂದೆ ಮತ್ತು ಶಿವಸೇನೆಯ ಇತರ 15 ಶಾಸಕರ ಅನರ್ಹತೆ ಬಗ್ಗೆ ಆಗಸ್ಟ್ 10ರ ಸುಮಾರಿಗೆ ನಿರ್ಧಾರವಾಗಲಿದೆ. ನಂತರ ಹಾಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಮುಖ್ಯಮಂತ್ರಿಯಾಗಿ ನೇಮಕವಾಗಬಹುದು ಎಂದು ಪೃಥ್ವಿರಾಜ್ ಚವಾಣ್ ಪ್ರಾದೇಶಿಕ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
‘ಶಿಂದೆ ತನ್ನ ತವರು ಜಿಲ್ಲೆ ಥಾಣೆಯ ಹೊರಗೆ ಯಾವುದೇ ಪ್ರಭಾವನ್ನು ಹೊಂದಿಲ್ಲದ ಕಾರಣ ಅವರ ನೇತೃತ್ವದಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಉತ್ಸುಕವಾಗಿಲ್ಲ. ಬಿಜೆಪಿಗೆ ಈಗ ಅಜಿತ್ ಪವಾರ್ ಅವರ ಪರ್ಯಾಯ ಆಯ್ಕೆ ಇದೆ’ ಎಂದೂ ಅವರು ಹೇಳಿದ್ದಾರೆ.
ಅಜಿತ್ ಪವಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಚುನಾವಣೆಯನ್ನು ಎದುರಿಸಲು ಬಿಜೆಪಿ ಬಯಸುತ್ತಿದೆ. ಇದು ಶಿಂದೆಯವರ ಭವಿಷ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರದ್ದು ಬಳಸಿ ಬೀಸಾಡುವ (ಯೂಸ್ ಅಂಡ್ ಥ್ರೋ) ಕಾರ್ಯಶೈಲಿಯಾಗಿದೆ ಎಂದು ಚವಾಣ್ ಆರೋಪಿಸಿದ್ದಾರೆ.
ಅಜಿತ್ ಪವಾರ್ ಸೇರಿದಂತೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಎಂಟು ಶಾಸಕರು ಜುಲೈ 2 ರಂದು ಶಿವಸೇನೆ–ಬಿಜೆಪಿ ಸರ್ಕಾರಕ್ಕೆ ಸೇರ್ಪಡೆಗೊಂಡರು. ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಹಾಗೂ ಎಂಟು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಅಜಿತ್ ಪವಾರ್ ಅವರಿಗೆ ಹಣಕಾಸು ಇಲಾಖೆಯನ್ನು ಹಂಚಿಕೆ ಮಾಡಲಾಯಿತು.