ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ 10ಕ್ಕೆ ಮಹಾರಾಷ್ಟ್ರ ಸಿಎಂ ಆಗಲಿರುವ ಅಜಿತ್‌ ಪವಾರ್: ಪೃಥ್ವಿರಾಜ್‌ ಚವಾಣ್

Published 24 ಜುಲೈ 2023, 16:17 IST
Last Updated 24 ಜುಲೈ 2023, 16:17 IST
ಅಕ್ಷರ ಗಾತ್ರ

ಮುಂಬೈ: ಆಗಸ್ಟ್‌ 10ರ ಸುಮಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿರುವ ಶಿವಸೇನೆಯ ಏಕನಾಥ ಶಿಂದೆ ಅವರ ಬದಲಿಗೆ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರು ಮುಖ್ಯಮಂತ್ರಿಯಾಗಬಹುದು ಎಂದು ಕಾಂಗ್ರೆಸ್‌ ಹಿರಿಯ ನಾಯಕ ಪೃಥ್ವಿರಾಜ್‌ ಚವಾಣ್‌ ಹೇಳಿದ್ದಾರೆ.

ಸಿಎಂ ಶಿಂದೆ ಮತ್ತು ಶಿವಸೇನೆಯ ಇತರ 15 ಶಾಸಕರ ಅನರ್ಹತೆ ಬಗ್ಗೆ ಆಗಸ್ಟ್‌ 10ರ ಸುಮಾರಿಗೆ ನಿರ್ಧಾರವಾಗಲಿದೆ. ನಂತರ ಹಾಲಿ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಮುಖ್ಯಮಂತ್ರಿಯಾಗಿ ನೇಮಕವಾಗಬಹುದು ಎಂದು ಪೃಥ್ವಿರಾಜ್‌ ಚವಾಣ್‌ ಪ್ರಾದೇಶಿಕ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

‘ಶಿಂದೆ ತನ್ನ ತವರು ಜಿಲ್ಲೆ ಥಾಣೆಯ ಹೊರಗೆ ಯಾವುದೇ ಪ್ರಭಾವನ್ನು ಹೊಂದಿಲ್ಲದ ಕಾರಣ ಅವರ ನೇತೃತ್ವದಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಉತ್ಸುಕವಾಗಿಲ್ಲ. ಬಿಜೆಪಿಗೆ ಈಗ ಅಜಿತ್‌ ಪವಾರ್ ಅವರ ಪರ್ಯಾಯ ಆಯ್ಕೆ ಇದೆ’ ಎಂದೂ ಅವರು ಹೇಳಿದ್ದಾರೆ.

ಅಜಿತ್‌ ಪವಾರ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಚುನಾವಣೆಯನ್ನು ಎದುರಿಸಲು ಬಿಜೆಪಿ ಬಯಸುತ್ತಿದೆ. ಇದು ಶಿಂದೆಯವರ ಭವಿಷ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರದ್ದು ಬಳಸಿ ಬೀಸಾಡುವ (ಯೂಸ್‌ ಅಂಡ್‌ ಥ್ರೋ) ಕಾರ್ಯಶೈಲಿಯಾಗಿದೆ ಎಂದು ಚವಾಣ್‌ ಆರೋಪಿಸಿದ್ದಾರೆ.

ಅಜಿತ್‌ ಪವಾರ್ ಸೇರಿದಂತೆ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ ಎಂಟು ಶಾಸಕರು ಜುಲೈ 2 ರಂದು ಶಿವಸೇನೆ–ಬಿಜೆಪಿ ಸರ್ಕಾರಕ್ಕೆ ಸೇರ್ಪಡೆಗೊಂಡರು. ಅಜಿತ್‌ ಪವಾರ್‌ ಉಪಮುಖ್ಯಮಂತ್ರಿಯಾಗಿ ಹಾಗೂ ಎಂಟು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಅಜಿತ್‌ ಪವಾರ್ ಅವರಿಗೆ ಹಣಕಾಸು ಇಲಾಖೆಯನ್ನು ಹಂಚಿಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT