ಪಿಲಿಭಿತ್( ಉತ್ತರ ಪ್ರದೇಶ): ತನ್ನ ಪತ್ನಿಯ ವಿರುದ್ಧ ಪೊಲೀಸರು ಕಿರುಕುಳದ ಪ್ರಕರಣ ದಾಖಲಿಸಲಿಲ್ಲ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಪೊಲೀಸ್ ವರಿಷ್ಠಾಧಿಕಾರಿಯ ನಿವಾಸದ ಎದುರು ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಪಿಲಿಭತ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಆತನ ವಿರುದ್ಧ ಕೌಟುಂಬಿಕ ದೌರ್ಜನ್ಯದ ಅಡಿ ಪತ್ನಿ ಪ್ರಕರಣ ದಾಖಲಿಸಿದ್ದರು. ಆದರೆ ಪತ್ನಿಯ ವಿರುದ್ಧ ಪತಿ ದೂರು ನೀಡಲು ಹೋದಾಗ ಪೊಲೀಸರು ದೂರನ್ನು ಸ್ವೀಕರಿಸಲಿಲ್ಲ ಎಂದು ಸಂತ್ರಸ್ತನ ಕುಟುಂಬಸ್ಥರು ಶನಿವಾರ ಹೇಳಿದ್ದಾರೆ.
ಪಿಲಿಭಿತ್ ಜಿಲ್ಲೆಯ ಸುಂಗರ್ಹಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾದ್ದ ಪ್ರದೀಪ್, ಎರಡು ತಿಂಗಳ ಹಿಂದೆ ಇಶಾ ಅವರನ್ನು ವಿವಾಹವಾಗಿದ್ದರು.
ಪ್ರದೀಪ್ ₹5 ಲಕ್ಷಕ್ಕೆ ಬೇಡಿಕೆಯಿಟ್ಟು ಹಿಂಸೆ ನೀಡುತ್ತಿದ್ದಾನೆ ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶನಿವಾರ ( ಫೆ.10) ತನ್ನ ಪತ್ನಿ ವಿರುದ್ಧ ದೂರು ನೀಡಲು ಪ್ರದೀಪ್ ಎಸ್ಪಿ ಕಚೇರಿಗೆ ಹೋದಾಗ ಅಧಿಕಾರಿ ಉಪಸ್ಥಿತರಿರಲಿಲ್ಲ. ಬಳಿಕ ಎಸ್ಪಿ ನಿವಾಸಕ್ಕೆ ತೆರಳಿದ ಪ್ರದೀಪ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವ್ಯಕ್ತಿಯ ಕುಟುಂಬವರು ಮಾಹಿತಿ ನೀಡಿದ್ದಾರೆ.
ವಿಷ ಸೇವಿಸಿದ ಪ್ರದೀಪ್ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.