ನವದೆಹಲಿ: ರಾಷ್ಟ್ರೀಯ ತನಿಖಾ ದಳ(ಎನ್ಐಎ)ವನ್ನು ಬಲಗೊಳಿಸಲು ನಿರ್ಧರಿಸಿದ್ದು, 2024 ರ ವೇಳೆಗೆ ಪ್ರತಿ ರಾಜ್ಯದಲ್ಲೂ ಎನ್ಐಎ ಶಾಖೆಗಳನ್ನು ಸ್ಥಾಪಿಸಲಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಹರಿಯಾಣದ ಸೂರಜ್ಕುಂಡ್ನಲ್ಲಿ 2 ದಿನಗಳ ಚಿಂತನಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸೈಬರ್ ಕ್ರೈಂ, ಡ್ರಗ್, ಗಡಿಯಲ್ಲಿನ ಭಯೋತ್ಪಾದನೆ, ಇತರೆ ಅಪರಾಧಗಳೊಂದಿಗೆ ವ್ಯವಹರಿಸಲು ಜಂಟಿಯಾಗಿ ಆಲೋಚಿಸಲು ಈ ಚಿಂತನಾ ಶಿಬಿರ ಸಹಕಾರಿ ಎಂದರು.
ಸಹಕಾರಿ ಸಂಯುಕ್ತ ವ್ಯವಸ್ಥೆ ಮತ್ತು ಸರ್ಕಾರದ ಪೂರ್ಣ ಗುರಿಯನ್ನು ತಲುಪಲು ಸಹಕಾರ, ಸಮನ್ವಯ ಮತ್ತು ಸಂಯೋಜನೆ ಮೂರಕ್ಕೂ ನಾವು ಮಹತ್ವ ನೀಡಿದ್ದೇವೆ. ಈ ನಿಟ್ಟಿನಲ್ಲಿ ಇರುವ ಸಂಪನ್ಮೂಲ ಬಳಕೆ ಮತ್ತು ಉನ್ನತೀಕರಣ ಅಗತ್ಯ ಎಂದು ಅವರು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ನಂತರ ಭಯೋತ್ಪಾದನಾ ಚಟುವಟಿಕೆ ಶೇ.34ರಷ್ಟು ಕುಸಿದಿದೆ. ಭದ್ರತಾ ಪಡೆಗಳ ಹತ್ಯೆಯಲ್ಲಿ ಶೇ.64ರಷ್ಟು, ನಾಗರೀಕರ ಹತ್ಯೆಯಲ್ಲಿ ಶೇ.90ರಷ್ಟು ಕಡಿಮೆಯಾಗಿದೆ ಎಂದು ಶಾ ಹೇಳಿದರು.