ಅಮೃತಸರ: ಸ್ವರ್ಣ ಮಂದಿರದ ಪಾರಂಪರಿಕ ಮಾರ್ಗದಲ್ಲಿ ಶನಿವಾರ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಸಮೀಪದಲ್ಲೇ ಸೋಮವಾರ ಬೆಳಿಗ್ಗೆ ಮತ್ತೊಂದು ಸ್ಫೋಟ ಸಂಭವಿಸಿದ್ದು, ಒಬ್ಬನಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಸುಮಾರು 6.15ಕ್ಕೆ ಸಂಭವಿಸಿದ ಸ್ಫೋಟದಲ್ಲಿ ಹೆಚ್ಚು ಹಾನಿ ಸಂಭವಿಸಿಲ್ಲ. ಸ್ಫೋಟಕವನ್ನು ಕಂಟೇನರ್ನಲ್ಲಿ ಇರಿಸಲಾಗಿತ್ತು. ಸ್ಫೋಟದ ಹಿಂದಿರುವ ನಿಖರ ಕಾರಣವನ್ನು ಇನ್ನಷ್ಟೇ ತಿಳಿಯಬೇಕಿದೆ. ಇದು ಯಾರದ್ದಾದರೂ ಕಿಡಿಗೇಡಿತನವೋ ಅಥವಾ ಭಯೋತ್ಪಾದಕರ ಕೃತ್ಯವೋ ಎಂಬುದನ್ನು ತನಿಖೆ ನಡೆಸಬೇಕಿದೆ. ವಿಧಿವಿಜ್ಞಾನ ತಂಡ ಪರಿಶೀಲನೆ ನಡೆಸಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಹೇಳಿದ್ದಾರೆ.
ಸ್ಫೋಟದಿಂದ ಭಕ್ತರಲ್ಲಿ ಆತಂಕ ಮನೆ ಮಾಡಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಬೇಕು ಎಂದು ಕಳೆದ 20 ವರ್ಷಗಳಿಂದ ನಿರಂತರವಾಗಿ ಸ್ವರ್ಣ ಮಂದಿರಕ್ಕೆ ಭೇಟಿ ನೀಡುತ್ತಿರುವ ಭಕ್ತ ಜಸ್ಬೀರ್ ಸಿಂಗ್ ಪಟ್ಟಿ ಹೇಳಿದ್ದಾರೆ.
ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಒಬ್ಬನಿಗೆ ಗಾಯವಾಗಿದ್ದು, ಕೆಲ ಕಟ್ಟಡಗಳ ಗಾಜುಗಳು ಹಾನಿಗೊಂಡಿದ್ದವು.
ಅಮೃತಸರದ ಸ್ವರ್ಣ ಮಂದಿರದ ಬಳಿ ಸೋಮವಾರ ಸಂಭವಿಸಿದ ಸ್ಫೋಟದ ನಂತರ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು – ಪಿಟಿಐ ಚಿತ್ರ
ಅಮೃತಸರದ ಸ್ವರ್ಣ ಮಂದಿರದ ಬಳಿ ಸೋಮವಾರ ಸಂಭವಿಸಿದ ಸ್ಫೋಟದ ನಂತರ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು – ಪಿಟಿಐ ಚಿತ್ರ