ನವದೆಹಲಿ: ಮಹಾನಗರಗಳಲ್ಲಿನ ಜನರ ಅನುಕೂಲಕ್ಕಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮಿನಿ ಆವೃತ್ತಿಯಾಗಿರುವ ವಂದೇ ಮೆಟ್ರೋವನ್ನು ದೊಡ್ಡ ನಗರಗಳ ಸುತ್ತಮುತ್ತ ರೈಲ್ವೆ ಅಭಿವೃದ್ಧಿಪಡಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ತಿಳಿಸಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ರ ಕೇಂದ್ರ ಬಜೆಟ್ನಲ್ಲಿ ಈವರೆಗಿನ ಅತ್ಯಧಿಕ ₹2.40 ಲಕ್ಷ ಕೋಟಿ ಅನುದಾನ ಘೋಷಿಸಿದ್ದಾರೆ. ಅದರ ಬೆನ್ನಲ್ಲೇ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವೈಷ್ಣವ್, ಡಿಸೆಂಬರ್ 2023 ರ ವೇಳೆಗೆ ಭಾರತವು ತನ್ನ ಮೊದಲ ಹೈಡ್ರೋಜನ್ ರೈಲನ್ನು ಪಡೆಯಲಿದೆ. ಇದು ಆರಂಭದಲ್ಲಿ ಕಲ್ಕಾ-ಶಿಮ್ಲಾದಂತಹ ಪಾರಂಪರಿಕ ಮಾರ್ಗದಲ್ಲಿ ಸಂಚರಿಸಲಿದೆ ಎಂದರು.
ರೈಲ್ವೆಗೆ 2013-2014ರಲ್ಲಿ ಒದಗಿಸಿದ ಮೊತ್ತಕ್ಕಿಂತ ಒಂಬತ್ತು ಪಟ್ಟು ಹೆಚ್ಚು ಈ ಸಲದ ಬಜೆಟ್ನಲ್ಲಿ ಸಿಕ್ಕಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಮೂಲಸೌಕರ್ಯ ಅಭಿವೃದ್ಧಿ, ಹೊಸ ಕೋಚ್ಗಳ ತಯಾರಿಕೆ, ಟ್ರ್ಯಾಕ್ಗಳ ನವೀಕರಣ ಮತ್ತು ನಿಲ್ದಾಣಗಳ ಪುನರಾಭಿವೃದ್ಧಿಗೆ ಹೂಡಿಕೆ ಮಾಡಲು ಗಮನಹರಿಸುತ್ತಿರುವ ರೈಲ್ವೆಗೆ, ಈ ಸಲದ ಬಜೆಟ್ ಇನ್ನಷ್ಟು ಬಲ ನೀಡುವುದು ಖಚಿತ.
‘ಇಂದಿನ ಬಜೆಟ್ ಭಾರತವನ್ನು ಇಡೀ ಜಗತ್ತಿಗೆ ಬೆಳವಣಿಗೆಯ ಎಂಜಿನ್ ಆಗಿಸಲಿದೆ. ಪ್ರಧಾನಿ ಮೋದಿ ಹೇಳಿದಂತೆ ಜಗತ್ತು ಭಾರತವನ್ನು ಭರವಸೆಯ ಕಿರಣವಾಗಿ ನೋಡುತ್ತಿದೆ, ಬಜೆಟ್ ಆ ದೃಷ್ಟಿಕೋನವನ್ನು ಕಲ್ಪಿಸುತ್ತಿದೆ. ಸಮಾಜದ ಪ್ರತಿಯೊಂದು ವರ್ಗದ ಜೀವನದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.