ಮುಂಬೈ: ನಿಷೇಧಿತ ಮಾದಕ ದ್ರವ್ಯ ಹೊಂದಿದ ಆರೋಪಕ್ಕಾಗಿ ನಟ ಮತ್ತು ಬಿಗ್ಬಾಸ್ ಮಾಜಿ ಸ್ಪರ್ಧಿ ಅಜಾಝ್ ಖಾನ್ (35) ಅವರನ್ನು ಮಂಗಳವಾರ ಬಂಧಿಸಲಾಗಿದೆ.
ಮುಂಬೈನ ಬೆಲಪುರ ಪ್ರದೇಶದ ಹೋಟೆಲ್ವೊಂದರಿಂದ ಖಾನ್ ಅವರನ್ನು ಬಂಧಿಸಲಾಗಿದೆ. ಇವರ ಬಳಿ ಇದ್ದ ಮಾದಕ ದ್ರವ್ಯದ ಬೆಲೆ 2.2 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
‘ಖಚಿತ ಮಾಹಿತಿ ಮೇರೆಗೆ ಖಾನ್ ಅವರನ್ನು ಬಂಧಿಸಲಾಗಿದೆ. ಅವರ ಬಳಿಕ ಎಕ್ಸ್ಟಸಿ ಎನ್ನುವ ಮಾದಕ ದ್ರವ್ಯ ಇತ್ತು’ ಎಂದು ಉಪ ಆಯುಕ್ತ ತುಷಾರ್ ದೋಷಿ ತಿಳಿಸಿದ್ದಾರೆ.
ಖಾನ್ ಅವರನ್ನು ಅ.25ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೌರತ್ವ ಮಸೂದೆಗೆ ವಿರೋಧ: ಬಂದ್
ಗುವಾಹತಿ: ಬಿಜೆಪಿ ನೇತೃತ್ವದ ಸರ್ಕಾರದ ಎಚ್ಚರಿಕೆಯ ನಡುವೆಯೂ, 2016ರ ಪೌರತ್ವ ಮಸೂದೆ ವಿರೋಧಿಸಿ 50 ಸಂಘಟನೆಗಳು ಮಂಗಳವಾರ ಅಸ್ಸಾಂ ರಾಜ್ಯವ್ಯಾಪಿ ಕರೆನೀಡಿದ್ದ 12 ಗಂಟೆಗಳ ಬಂದ್ ಯಶಸ್ವಿಯಾಗಿದೆ.
ಮುಷ್ಕರದ ಕಾರಣಕ್ಕೆ ಗೈರು ಹಾಜರಾಗುವ ಸರ್ಕಾರಿ ನೌಕರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು ಅಂಗಡಿಗಳನ್ನು ಮುಚ್ಚುವ ವ್ಯಾಪಾರಿಗಳ ಪರವಾನಗಿಗಳನ್ನು ರದ್ದುಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿತ್ತು.
ಆದರೂ, ಶಾಲೆ, ಅಂಗಡಿಗಳು ಬಂದ್ ಆಗಿದ್ದವು. ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇತ್ತು. ವಾಹನಗಳು ರಸ್ತೆಗೆ ಇಳಿಯಲಿಲ್ಲ.
ಪಟೇಲ್ ಜನ್ಮ ದಿನ ಏಕತಾ ಓಟ
ನವದೆಹಲಿ: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನವಾದ ಅಕ್ಟೋಬರ್ 31ರಂದು ಏಕತೆಗಾಗಿ ಓಟ, ಪ್ರತಿಜ್ಞೆ ಸ್ವೀಕಾರ ಮತ್ತು ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಎಲ್ಲ ವಿಶ್ವವಿದ್ಯಾಲಯಗಳಿಗೆ ತಿಳಿಸಿದೆ.