ಜಮ್ಮು : 6 ಮಂದಿಯನ್ನು ಬಲಿಪಡೆದು 11 ಮಂದಿಯನ್ನು ಗಾಯಾಳುಗಳನ್ನಾಗಿ ಮಾಡಿದ ರಜೌರಿಯ ಅವಳಿ ಭಯೋತ್ಪಾದನಾ ದಾಳಿಯ ವಿರುದ್ಧ ಪೂಂಛ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
‘ಈ ದಾಳಿಯ ವಿರುದ್ಧ ಇಡೀ ಜಮ್ಮುವಿನಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗಡಿ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
ಪ್ರತಿಭಟನೆ ವೇಳೆ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು, ಜಮ್ಮುವಿನಲ್ಲಿ ಅಲ್ಪಸಂಖ್ಯಾತರಿರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.
ಕಥುವಾದ ಕಾಲಿಬಾಡಿಯಲ್ಲೂ ಒಟ್ಟುಗೂಡಿದ ಪ್ರತಿಭಟನಕಾರರು, ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟಿಸಿದರು. ಇದರಿಂದ ಸಂಚಾರ ಅಸ್ತವ್ಯಸ್ತವಾಯಿತು. ಇದೇ ವೇಳೆ, ಪಾಕಿಸ್ತಾನದ ಪ್ರತಿಕೃತಿಯನ್ನು ದಹಿಸಿ ತಮ್ಮ ವಿರೋಧ ವ್ಯಕ್ತಪಡಿಸಿದರು.
ರಜೌರಿ ದಾಳಿಯನ್ನು ಖಂಡಿಸಿದ ಕಾಶ್ಮೀರಿ ಪಂಡಿತ್ ನೌಕರರು, ಜಮ್ಮು ಮತ್ತು ಕಾಶ್ಮೀರದಿಂದ ತಮ್ಮನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ, ಕಂದೀಲು ಮೆರವಣಿಗೆ ನಡೆಸಿದರು.