ರಾಂಚಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಬೇಕಿದ್ದ 2ನೇ ಹಂತದ 'ಭಾರತ ಜೋಡೊ ನ್ಯಾಯ ಯಾತ್ರೆ'ಯನ್ನು ಜಾರ್ಖಂಡ್ನಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರೈತರು ರಾಷ್ಟ್ರ ರಾಜಧಾನಿಯಲ್ಲಿ ನಡೆಸುತ್ತಿರುವ 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ರಾಹುಲ್ ತೆರಳಿರುವುದರಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ರಾಹುಲ್ ಗಾಂಧಿ ಅವರು ಛತ್ತೀಸಗಢದಿಂದ ಜಾರ್ಖಂಡ್ಗೆ ಗರ್ಹಾವ ಜಿಲ್ಲೆಯ ಮೂಲಕ ಬರಬೇಕಿತ್ತು. ಎರಡನೇ ಹಂತದ ಯಾತ್ರೆಗೆ ಇಂದು ದಿನಾಂಕ ನಿಗದಿಯಾಗಿತ್ತು.
'ಮಂಗಳವಾರ ತಡರಾತ್ರಿ ಕೈಗೊಂಡ ನಿರ್ಧಾರದಂತೆ, ಜಾರ್ಖಂಡ್ನಲ್ಲಿ ನಡೆಯಬೇಕಿದ್ದ ಭಾರತ್ ಜೋಡೊ ನ್ಯಾಯ ಯಾತ್ರೆಯ ಎಲ್ಲ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ' ಎಂದು ಕಾಂಗ್ರೆಸ್ ವಕ್ತಾರೆ ಸೋನಲ್ ಶಾಂತಿ ತಿಳಿಸಿದ್ದಾರೆ.
ಯಾತ್ರೆಯು ಜಾರ್ಖಂಡ್ನಿಂದ ಪುನರಾರಂಭಗೊಳ್ಳುವುದು ಅಸಂಭವವಾಗಿದೆ. ಆದರೆ, ಗರ್ಹಾವ ಜಿಲ್ಲೆಯ ರಂಕಾದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರೊಂದಿಗೆ ನಿಗದಿಯಾಗಿದ್ದ ಮಾತುಕತೆಯನ್ನು ಜೈರಾಮ್ ರಮೇಶ್ ಹಾಗೂ ಇನ್ನಿತರ ನಾಯಕರು ನಡೆಸಿಕೊಡಲಿದ್ದಾರೆ ಎಂದೂ ಹೇಳಿದ್ದಾರೆ.